ಚನ್ನಮ್ಮನ ಕಿತ್ತೂರು: `ದೇಶದ ಸುಮಾರು ನಾಲ್ಕು ಕೋಟಿ ರೈತರಿಗೆ ರೂ. 72ಸಾವಿರ ಕೋಟಿ ಸಾಲಮನ್ನಾ ಮಾಡಿರುವ ಕೇಂದ್ರ ಸರ್ಕಾರ, ಈಗ ಬಯಲು ಸೀಮೆಯ ಅತಿದೊಡ್ಡ ಹಿಡುವಳಿದಾರರ ನೆರವಿಗೆ ಧಾವಿಸಲು ಚಿಂತನೆ ನಡೆಸಿದೆ~ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದರು.
ಹೊಸಕಾದರವಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ `ಕಾಂಗ್ರೆಸ್ನೊಂದಿಗೆ ಬನ್ನಿ; ಬದಲಾವಣೆ ತನ್ನಿ~ ಎಂಬ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
`ಕೇಂದ್ರ ಕೊಟ್ಟಿರುವ ವಿವಿಧ ಕಾರ್ಯ ಕ್ರಮಗಳನ್ನು ಜನತೆಗೆ ತಿಳಿಸುವ ಕೆಲಸ ಆಗಬೇಕಿದೆ~ ಎಂದು ಅಭಿಪ್ರಾಯ ಪಟ್ಟರು. `ರಾಜ್ಯದಲ್ಲಿ 30 ಹೊಸ ರೈಲ್ವೆ ಮಾರ್ಗಗಳ ಸಮೀಕ್ಷೆಗೆ ಆದೇಶ ಮಾಡಲಾಗಿದೆ. 16 ಹೊಸ ರೈಲ್ವೆ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ಧಾರವಾಡ -ಬೆಳಗಾವಿ ನಗರಕ್ಕೆ ನೇರ ಮಾರ್ಗದ ಯೋಜನೆಯೂ ಸೇರಿದೆ~ ಎಂದು ಅವರು ವಿವರಿಸಿದರು.
`ಮೀರಜ್-ಯಶವಂತಪುರ ಮಾರ್ಗವಾಗಿ ಸಂಚರಿಸುವ ರೈಲ್ವೆಯನ್ನು ಮಂಗಳವಾರದಿಂದ ಪ್ರಾರಂಭಿಸಲಾಗಿದೆ~ ಎಂದು ನುಡಿದ ಅವರು, `ಕೇಂದ್ರ ಮಂತ್ರಿಗಳಾದ ಎಸ್. ಎಂ. ಕೃಷ್ಣ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ರಾಜ್ಯದಲ್ಲಿಯ ನಾಲ್ಕು ವಿಭಾಗಗಳನ್ನು ಹಂಚಿಕೊಂಡು ಅಲ್ಲಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ~ ಎಂದರು.
ಮಾಜಿ ಸಚಿವ ಡಿ. ಬಿ. ಇನಾಂದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಎ. ಕೃಷ್ಣಪ್ಪ, ಎಚ್. ಎಂ. ರೇವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್, ರಾಣಿ ಶುಗರ್ಸ್ ಉಪಾಧ್ಯಕ್ಷ ರಾಜೇಂದ್ರ ಅಂಕಲಗಿ ಮಾತನಾಡಿದರು.