ಕೋಲಾರ: ಕೇಂದ್ರದ ಅಧಿಕಾರಿಗಳು ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ಮಾಡಿ ವಾಪಸು ತೆರಳಿದ್ದಾರೆ. ಇದೇ ವೇಳೆ, ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮೇಲಿನ ಅವಲಂಬನೆ ಜಿಲ್ಲೆಯಲ್ಲಿ ಮಿತಿ ಮೀರುತ್ತಿರುವ ಪರಿಣಾಮವಾಗಿ ವಿಫಲವಾಗುತ್ತಿರುವ ಕೊಳವೆಬಾವಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೂ ಕೊಳವೆಬಾವಿಯನ್ನೇ ಅವಲಂಬಿಸಬೇಕಾದ ಸನ್ನಿವೇಶ ಮುಂದುವರಿದಿದೆ. ‘ಅಂತರ್ಜಲ ಬರ’ ಆತಂಕಕಾರಿ ಮಟ್ಟದಲ್ಲಿ ತೀವ್ರಗೊಳ್ಳುತ್ತಿದೆ.
2013–14ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ 1318 ಕೊಳವೆ ಬಾವಿ ಕೊರೆಯಲಾಗಿದೆ. ಆದರೆ ಅವುಗಳ ಪೈಕಿ 402 (ಸುಮಾರು ಮೂರನೇ ಒಂದು ಭಾಗದಷ್ಟು) ಕೊಳವೆಬಾವಿಗಳು ವಿಫಲವಾಗಿವೆ.
ಮುಂದಿನ ಜನವರಿಯಿಂದ ಮೇ ಕೊನೆವರೆಗೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ನಿರ್ವಹಿಸುವ ಸಲುವಾಗಿ ಜಿಲ್ಲಾಡಳಿತ ಮತ್ತೆ 352 ಕೊಳವೆಬಾವಿ ಕೊರೆಯುವ ತುರ್ತು ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಅವುಗಳ ಪೈಕಿ ಎಷ್ಟು ಸಫಲವಾಗಲಿವೆ ಎಂಬ ಲೆಕ್ಕಾಚಾರವೂ ನಡೆದಿದೆ.
ಕೋಲಾರ ತಾಲ್ಲೂಕಿನಲ್ಲಿ 81, ಮಾಲೂರು ತಾಲ್ಲೂಕಿನಲ್ಲಿ 60, ಬಂಗಾರಪೇಟೆ ತಾಲ್ಲೂಕಿನಲ್ಲಿ 86, ಮುಳಬಾಗಲು ತಾಲ್ಲೂಕಿನಲ್ಲಿ 65 ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ 60 ಕೊಳವೆಬಾವಿ ಕೊರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಅದಕ್ಕಾಗಿ ₨ 6.79 ಕೋಟಿ ಬೇಕಾಗಿದೆ. ಕೊರೆದ ಕೊಳವೆಬಾವಿಗಳಿಗೆ ಪಂಪ್, ಮೋಟರ್ ಅಳವಡಿಸಲು ₨ 18.64 ಕೋಟಿ ಬೇಕಾಗಿದೆ.
ಟ್ಯಾಂಕರ್ ನೀರು: ಹೊಸ ಕೊಳವೆಬಾವಿ ಕೊರೆಯುವ ಜೊತೆಗೆ ಜಿಲ್ಲೆಯ 1186 ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಸುವ ಅಂದಾಜನ್ನು ಜಿಲ್ಲಾಡಳಿತ ಮಾಡಿದೆ. ಖಾಸಗಿ ಕೊಳವೆಬಾವಿಗಳಿಂದ ಪ್ರತಿ ಟ್ರಿಪ್ಗೆ ₨ 350ರಂತೆ ನೀರನ್ನು ಖರೀದಿಸಿ ಪೂರೈಸುವ ವ್ಯವಸ್ಥೆ ಇದು.
ಕೋಲಾರ ತಾಲ್ಲೂಕಿನ 227, ಮಾಲೂರು ತಾಲ್ಲೂಕಿನ 283, ಬಂಗಾರಪೇಟೆ ತಾಲ್ಲೂಕಿನ 270, ಮುಳಬಾಗಲು ತಾಲ್ಲೂಕಿನ 189 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 217ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕವೇ ನೀರನ್ನು ಪೂರೈಸಬೇಕಾಗಿದೆ.
2412 ಟ್ರಿಪ್: ಐದು ತಿಂಗಳ ಅವಧಿಯಲ್ಲಿ ಪ್ರತಿ ದಿನವೂ ಈ ಎಲ್ಲ ಹಳ್ಳಿಗಳಿಗೆ ಒಟ್ಟಾರೆ 2421 ಟ್ರಿಪ್ ನೀರನ್ನು ಪೂರೈಸಬೇಕಾಗಬಹುದು. ಅದಕ್ಕಾಗಿ ₨ 12.71 ಕೋಟಿ ಬೇಕಾಗುತ್ತದೆ. ಒಟ್ಟಾರೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸಲು 38.14 ಕೋಟಿ ಬೇಕಾಗುತ್ತದೆ ಎಂಬುದು ಜಿಲ್ಲಾಡಳಿತದ ಸದ್ಯದ ಅಂದಾಜು.
ಕೋಲಾರದಲ್ಲಿ ಸಮಸ್ಯೆ: ಜಿಲ್ಲೆಯ ಎರಡು ನಗರಸಭೆ ಮತ್ತು ಪುರಸಭೆಗಳ ಪೈಕಿ ಕೋಲಾರ ನಗರಸಭೆಯನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಪಟ್ಟಣ ಪ್ರದೇಶಗಳಲ್ಲಿ ಕೊಳವೆಬಾವಿ ಮೂಲಕವೇ ನೀರನ್ನು ಪೂರೈಸಲಾಗುತ್ತಿದೆ. ಕೋಲಾರ ನಗರದಲ್ಲಿ ಮಾತ್ರ ಕೊಳವೆಬಾವಿಗಳ ಮೂಲಕವಷ್ಟೇ ಅಲ್ಲದೆ, ಖಾಸಗಿ ಟ್ಯಾಂಕರುಗಳ ಮೂಲಕವೂ ನೀರನ್ನು ಪೂರೈಸುವ ಸನ್ನಿವೇಶವೇ ಮುಂದುವರಿದಿದೆ. ನಗರಸಭೆಯ 35 ವಾರ್ಡ್ಗಳ ಪೈಕಿ 32 ರಲ್ಲಿ 52 ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿದೆ. ಪ್ರತಿ ದಿನವೂ 260 ಟ್ರಿಪ್ಗಳಲ್ಲಿ ನೀರು ಪೂರೈಕೆಯಾಗುತ್ತಿದ್ದರೂ ಜನರ ಬಾಯಾರಿಕೆ ಮಾತ್ರ ತಣಿದಿಲ್ಲ. ‘ನೀರು ಬರಲಿಲ್ಲ’ ಎಂಬುದು ನಿತ್ಯದ ದೂರಾಗಿದೆ.
ಜಿಲ್ಲೆಯ ಪಟ್ಟಣ ಮತ್ತು ನಗರ ಪ್ರದೇಶಗಳ 166 ವಾರ್ಡ್ಗಳಲ್ಲಿ 1083 ಕೊಳವೆಬಾವಿಗಳಿವೆ. ಅವುಗಳ ಪೈಕಿ 771 ಮಾತ್ರ ನೀರು ಕೊಡುತ್ತಿವೆ. ಉಳಿದ 312 ಸ್ಥಗಿತಗೊಂಡಿವೆ.
112 ಹೊಸ ಬಾವಿ: ನಗರ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ 11 ಹೊಸ ಕೊಳವೆಬಾವಿಗಳನ್ನು ಮುಂದಿನ ಐದು ತಿಂಗಳ ಅವಧಿಯಲ್ಲಿ ಕೊರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಅಲ್ಲದೆ, ಟ್ಯಾಂಕರ್ ಮೂಲಕವೂ ನೀರು ಪೂರೈಸಲು ಸಜ್ಜಾಗುತ್ತಿದೆ. ಟ್ಯಾಂಕರ್ ನೀರಿಗೆಂದು ₨ 13.83 ಕೋಟಿ ಸೇರಿ ಒಟ್ಟಾರೆ ₨ 21.49 ಕೋಟಿ ಬೇಕಾಗಬಹುದು ಎಂಬುದು ಅಂದಾಜು.
ನೀರು ಸಿಗುತ್ತದೆಯೇ?: ಇಷ್ಟೆಲ್ಲ ಕೊಳವೆಬಾವಿ ಆಧಾರಿತ ಲೆಕ್ಕಾಚಾರಗಳು ನಡೆಯುತ್ತಿರುವ ಹೊತ್ತಿನಲ್ಲೆ ಎರಡು ಪ್ರಮುಖ ಪ್ರಶ್ನೆಗಳು ಎದ್ದಿವೆ. ನಿರೀಕ್ಷಿಸಿದಷ್ಟು ನೀರು ಹೊಸ ಕೊಳವೆಬಾವಿಗಳಲ್ಲಿ ದೊರಕುತ್ತದೆಯೇ ಎಂಬುದು ಜಿಲ್ಲಾಡಳಿತದ ಮುಂದಿರುವ ಪ್ರಶ್ನೆ. ಕೊಳವೆಬಾವಿಯೋ ಟ್ಯಾಂಕರ್ ನೀರೋ ಏನಾದರೂ ಸರಿ, ಒಟ್ಟಿನಲ್ಲಿ ನಮ್ಮ ನೀರಿನ ಸಮಸ್ಯೆ ಬಗೆ ಹರಿಯುತ್ತದೆಯೇ ಎಂಬುದು ಜನರ ಮುಂದಿರುವ ಪ್ರಶ್ನೆ.
ಜಿಲ್ಲೆಯಲ್ಲಿ ಕೊಳವೆಬಾವಿ ಸ್ಥಿತಿ– ಗತಿ
ತಾಲ್ಲೂಕು ಸಫಲ ವಿಫಲ ಒಟ್ಟು
ಕೋಲಾರ 277 116 393
ಮಾಲೂರು 188 84 242
ಬಂಗಾರಪೇಟೆ 175 60 235
ಮುಳಬಾಗಲು 86 35 121
ಶ್ರೀನಿವಾಸಪುರ 220 107 327
ಒಟ್ಟು 916 402 1318
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.