ದೊಡ್ಡಬಳ್ಳಾಪುರ: ತಾಲ್ಲೂಕು ಆಡಳಿತದ ವತಿಯಿಂದ ಮೂರು ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿನ ಗೋ ಶಾಲೆಗಳು ರಾಸುಗಳಿಂದ ತುಂಬಿ ಹೋಗಿವೆ.
ತಾಲ್ಲೂಕಿನ ಅರಳುಮಲ್ಲಿಗೆ, ಗುಂಡಮಗೆರೆ ಹಾಗೂ ಪಾಲ್ಪಾಲ್ದಿನ್ನೆ ಗ್ರಾಮಗಳ ಕೆರೆ ಅಂಗಳದಲ್ಲಿನ ತಾತ್ಕಾಲಿಕ ಗೋ ಶಾಲೆಗಳಲ್ಲಿ ಪ್ರತಿ ದಿನ ಸುಮಾರು 600 ರಿಂದ 1,000 ರಾಸುಗಳಿಗೆ ಹುಲ್ಲಿನ ವ್ಯವಸ್ಥೆ ಮಾಡಲಾಗಿದೆ.
ತೀವ್ರ ಮೇವಿನ ಕೊರತೆಯಿಂದ ಪರದಾಡುತ್ತಿರುವ ರೈತರು ಗೋಶಾಲೆಗೆ ರಾಸುಗಳನ್ನು ಕರೆ ತಂದು ಸಂಜೆವರೆಗೆ ಮೇವು ತಿನ್ನಿಸಿಕೊಂಡು ಮನೆಗೆ ತೆರಳುತ್ತಿದ್ದಾರೆ. ಹಾಲು ಕರೆಯದ ರಾಸು, ಎತ್ತುಗಳನ್ನು ಗೋ ಶಾಲೆಯಲ್ಲಿ ಕಟ್ಟಿ ರಾತ್ರಿ-ಹಗಲು ಸಾಕಾಣಿಕೆ ಮಾಡಲಾಗುತ್ತಿದೆ.
ಹಣದ ಕೊರತೆ ಇಲ್ಲ: ತಾಲ್ಲೂಕಿನಲ್ಲಿ ತೆರೆಯಲಾಗಿರುವ ತಾತ್ಕಾಲಿನ ಗೋಶಾಲೆಗಳಲ್ಲಿನ ರಾಸುಗಳಿಗೆ ಮೇವು ಖರೀದಿಸಲು ಹಣಕಾಸಿನ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳು ಈಗಾಗಲೇ ತಾಲ್ಲೂಕು ಆಡಳತಕ್ಕೆ ಹಣ ನೀಡಿದ್ದು ಎಲ್ಲಿಯೇ ಮೇವು ದೊರೆತರು ಖರೀದಿಸಿ ತರುವಂತೆ ಆದೇಶ ನೀಡಿದ್ದಾರೆ ಎಂದು ತಹಸೀಲ್ದಾರ್ ಚಂದ್ರ ತಿಳಿಸಿದ್ದಾರೆ.
ಒಂದು ವಾರದಿಂದ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿರುವುದೇ ಇಲ್ಲ. ಮೇವಿಗಾಗಿ ಮಂಡ್ಯ, ಬಳ್ಳಾರಿ ಜಿಲ್ಲೆಯಲ್ಲಿ ಸುತ್ತಾಡಿ 20 ಲೋಡ್ ಮೇವು ಖರೀದಿಸಲಾಗಿದೆ. ಮೇವಿನ ಕೊರತೆ ಉಂಟಾಗದಂತೆ ಎಲ್ಲಾ ಗೋ ಶಾಲೆಗಳಲ್ಲಿ ನಿಗಾ ವಹಿಸಲಾಗಿದೆ.
ಇದಕ್ಕಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಉಸ್ತುವಾರಿಗೆ ನೇಮಿಸಲಾಗಿದೆ. ಗೋ ಶಾಲೆಯಲ್ಲಿ ರಾಸುಗಳು ಯಾವುದೇ ರೀತಿಯ ರೋಗಗಳಿಗೆ ತುತ್ತಾಗದಂತೆ ಪಶು ವೈದ್ಯರನ್ನು ನಿಯೋಜಿಸಲಾಗಿದೆ. ರೈತರಿಗೆ ಅಗತ್ಯ ಇರುವವರೆಗೂ ಗೋಶಾಲೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.