ಚಾಮರಾಜನಗರ: `ಹರವೆ ಹೋಬಳಿಗೆ ಪ್ರಥಮ ಆದ್ಯತೆ ನೀಡುವುದೊಂದಿಗೆ ಬರಪರಿಹಾರ ಕಾಮಗಾರಿ ಕೈಗೆತ್ತಿ ಕೊಳ್ಳಲು ಜಿಲ್ಲಾಡಳಿತ ಮುಂದಾಗ ಬೇಕು~ ಎಂದು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ತಾಲ್ಲೂಕಿನ ಮುಕ್ಕಡಹಳ್ಳಿಯಲ್ಲಿ ಶುಕ್ರವಾರ ನಬಾರ್ಡ್ ನೆರವಿನೊಂದಿಗೆ 45 ಲಕ್ಷ ರೂ ವೆಚ್ಚದಡಿ ಮುಕ್ಕಡಹಳ್ಳಿ - ಹರವೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಹರವೆ ಭಾಗ ಸಂಪೂರ್ಣ ಬರಪೀಡಿತವಾಗಿದೆ. ಸಕಾಲದಲ್ಲಿ ಮಳೆ ಇಲ್ಲದೆ ರೈತರ ಫಸಲು ಕೈಸೇರಿಲ್ಲ. ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬಿತ್ತನೆ ವೆಚ್ಚವೂ ಸಿಗದಂತಾಗಿದೆ. ಹೀಗಾಗಿ, ಈ ಹೋಬಳಿಯಲ್ಲಿ ಬರಪರಿಹಾರ ಕಾಮಗಾರಿ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
`ಈ ಸಂಬಂಧ ಜಿಲ್ಲಾಧಿಕಾರಿ ಯೊಂದಿಗೆ ಚರ್ಚಿಸಿದ್ದೇನೆ. ರಾಜ್ಯ ಸರ್ಕಾರ ಬರ ಕಾಮಗಾರಿ ಕೈಗೊಳ್ಳಲು ತುರ್ತುಹಣ ಬಿಡುಗಡೆ ಮಾಡಿದೆ. ಇದನ್ನು ಬಳಸಿಕೊಂಡು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ವಲಸೆ ಹೋಗುವ ರೈತರಿಗೆ ಉದ್ಯೋಗ ಕಲ್ಪಿಸಿಕೊಡಲು ಮನವಿ ಮಾಡಿದ್ದೇನೆ~ ಎಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಫಲಾನುಭವಿಗಳಿಗೆ ಶೀಘ್ರ ಹಣ ಪಾವತಿ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿ.ಪಂ. ಸದಸ್ಯೆ ಸರಸಮ್ಮ, ಗ್ರಾ.ಪಂ. ಅಧ್ಯಕ್ಷ ರಾಜಕುಮಾರ್, ಉಪಾಧ್ಯಕ್ಷ ಕೆರೆಹಳ್ಳಿ ನವೀನ್, ತಾ.ಪಂ. ಮಾಜಿ ಸದಸ್ಯರಾದ ಮುಕ್ಕಡಹಳ್ಳಿ ರವಿ ಕುಮಾರ್, ಕೆ.ಎಲ್. ರವಿಕುಮಾರ್, ಗ್ರಾ.ಪಂ ಸದಸ್ಯ ರೇವಣ್ಣ, ಕೆಂಪರಾಜು, ಚಂದ್ರು, ಕೂಸಪ್ಪ, ಹರವೆ ಆನಂದ್, ನಾಗರಾಜು ಇತರರು ಹಾಜರಿದ್ದರು.
ಕಾಮಗಾರಿಗೆ ಚಾಲನೆ: ಹರವೆ ಹೋಬಳಿಯ ಭುಜಗನಪುರ ಗ್ರಾಮದಲ್ಲಿ ಎಸ್ಇಪಿ ಯೋಜನೆಯಡಿ 20 ಲಕ್ಷ ರೂ, ಕೆರೆಹಳ್ಳಿಯಲ್ಲಿ 4.40 ರೂ ವೆಚ್ಚದಡಿ ಚರಂಡಿ, ರಸ್ತೆ ನಿರ್ಮಾಣ ಹಾಗೂ ಸಾಗಡೆ ಗ್ರಾಮದಲ್ಲಿ ಸಾಮರ್ಥ್ಯಸೌಧ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದರು.