ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆಯೇ ಸಂಭ್ರಮಾಚರಣೆ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಿಥ್ ಆಚರಿಸಿದರೆ ತತ್ವಶಾಸ್ತ್ರ ಚಿಂತಿಸುತ್ತದೆ. ಮಿಥ್, ಗ್ರಹಿಕೆಯನ್ನು ಬೆಳವಣಿಗೆಯಾಗಿ ನೋಡಿದರೆ, ತತ್ವಶಾಸ್ತ್ರವು `ಬಹು~ವನ್ನು `ಏಕ~ಕ್ಕೆ ಸೀಮಿತಗೊಳಿಸುವುದರ ಮೂಲಕ ಅದನ್ನು ಗ್ರಹಿಸಲು ಪ್ರಯತ್ನಿಸುತ್ತದೆ.

ಬಹುರೂಪಗಳ ಹಿಂದಿರುವ ಏಕಸತ್ವವನ್ನು ಹುಡುಕಲೆತ್ನಿಸುತ್ತದೆ. ಕವಿಯಾಗಿ ನಾನು ಬಹುರೂಪತೆಯನ್ನು ಅದರ ಎಲ್ಲ ಸಮೃದ್ಧಿಯಲ್ಲಿ ಒಪ್ಪಿಕೊಳ್ಳುತ್ತೇನೆ... ನಾನು ಯಾವುದನ್ನು ಕಾಣುವುದೂ ಸಮೃದ್ಧಿಯ, ಅತಿಶಯದ ರೂಪದಲ್ಲಿ; ಹುಚ್ಚೆಬ್ಬಿಸುವ ಹರ್ಷ, ಕರಾಳ ಕ್ರೌರ್ಯ, ಆಳನೋವು, ಗಾಢ ಬೆಳವಣಿಗೆ, ಕಟ್ಟುಕಿತ್ತ ಕಾಮ, ಏಕಾಕಿತನ, ಐತಿಹ್ಯಾತ್ಮಕ ರಚನೆಗಳ, ಐತಿಹ್ಯಾತ್ಮಕ ಪಾತ್ರಗಳ ಅದ್ಭುತ ಹೋರಾಟಗಳು - ಇವೆಲ್ಲವನ್ನೂ ನಾನು ಸಂಭ್ರಮದಿಂದ ಆಚರಿಸುತ್ತೇನೆ... ನನ್ನ ಮಟ್ಟಿಗೆ ಸಂಭ್ರಮಾಚರಣೆಯು ಅನುಭವದ ಪ್ರಾಥಮಿಕ ಗ್ರಹಣವಿಧಾನ. 

ನನ್ನ ಅನುಭವಗ್ರಹಿಕೆಯ ಕೇಂದ್ರದಲ್ಲಿರುವುದು ಬಹುತ್ವದ ಒಂದು ವರ್ಣಮಯ, ವೈಭವಸಮೃದ್ಧ ಪ್ರಜ್ಞೆ, ಹಾಗಾಗಿ ಮಿಥ್‌ಗಳನ್ನು ಸೃಷ್ಟಿಸುವಂತಹ ಮನೋಧರ್ಮಕ್ಕೆ ನಾನು ತುಂಬಾ ಹತ್ತಿರದಲ್ಲಿರುವಂಥವನು.

ನಾನು ಬರೆಯುತ್ತೇನೆ. ಬರವಣಿಗೆಯಲ್ಲಿ ನನ್ನ ಅನಿಸಿಕೆಗಳನ್ನು ಕಟ್ಟುತ್ತೇನೆ. ನನ್ನ ಅನಿಸಿಕೆಗಳೆಂದರೆ ನನ್ನ ಅನುಭವಗಳು. ನಾನು ಕಟ್ಟುವುದು ಶಬ್ದಗಳನ್ನು ಬಳಸಿ. ಈ ಶಬ್ದಗಳು ನನ್ನ ಪರಿಸರದ ಅಂಶಗಳಾಗಿರುವ ಕಥೆಗಳು, ಕಥೆಗಳ ತುಣುಕುಗಳು, ಚಿತ್ರಗಳು ಇತ್ಯಾದಿ.

ನನ್ನ ಪರಿಸರದ ಪ್ರಜ್ಞೆಯೆಂದರೆ, ನಾನು ಕಾಲ ಮತ್ತು ಪ್ರದೇಶಗಳ ಆಯಾಮದಲ್ಲಿ ನನ್ನ ಪರಿಸರಕ್ಕೆ ಪ್ರತಿಸ್ಪಂದಿಸುವ ಮಾರ್ಗ, ನಾನು ಬಳಸಿಕೊಳ್ಳುವ ಕಥೆಗಳು, ಫ್ಯಾಂಟಸಿಗಳು, ಪ್ರತೀಕಗಳು ಇತ್ಯಾದಿಗಳಲ್ಲದೆ ಬೇರಾವುದೂ ಅಲ್ಲ.
 
ಇದರ ಅರ್ಥ ನನ್ನ ಆಚೆಗೆ ಮೊದಲೆ ಅಸ್ತಿತ್ವದಲ್ಲಿರುವ ವಸ್ತುವೊಂದರೊಡನೆ ನಾನು ಕಾವ್ಯಾತ್ಮಕ ಸಂಬಂಧ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದೇನೂ ಅಲ್ಲ. ನನ್ನ ಆಚೆಗಿರುವುದು ಒಂದು ಅನಾಮಧೇಯ ಶಬ್ದರಾಶಿ ಮಾತ್ರ. ಅದು ಇಟ್ಟಿಗೆ - ಗಾರೆಗಳಂತೆ ಆಕಾರರಹಿತ ಹಾಗೂ ವ್ಯಕ್ತಿತ್ವರಹಿತವಾದದ್ದು. ರಾಶಿರಾಶಿಯಾಗಿ ಚೆಲ್ಲಿ ಕೊಂಡಿರುವಂಥದ್ದು. ನನ್ನ ಪರಿಸರವನ್ನು ನನ್ನ ಸ್ವಂತದ್ದಾಗಿಸಿಕೊಳ್ಳುವಲ್ಲಿ ನಾನು ಸ್ವತಃ ಅದನ್ನು ಕಟ್ಟಿಕೊಳ್ಳಬೇಕು.  

ಇಂಥ ಪ್ರಕ್ರಿಯೆಯಲ್ಲಿ ನಾನು ನನ್ನ ಪರಿಸರಕ್ಕೊಂದು ವ್ಯಕ್ತಿತ್ವವನ್ನು ಕೊಡುತ್ತೇನೆ ಹಾಗೂ ಅದೇ ಸಮಯದಲ್ಲಿ ಓರ್ವ ಕವಿಯಾಗಿ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತೇನೆ. ನಾನು ಮತ್ತು ನನ್ನ ಪರಿಸರ ಇಬ್ಬರೂ ಪರಸ್ಪರ ರೂಪಿಸಿಕೊಳ್ಳುತ್ತೇವೆ.

ನಾನು ನನ್ನ ಸುತ್ತ ನೋಡುತ್ತೇನೆ. ನನ್ನ ಒಳಗೆ ನೋಡಿಕೊಳ್ಳುತ್ತೇನೆ. ಎರಡೂ ಒಂದೇ ಪ್ರಕ್ರಿಯೆಯ ಎರಡು ಭಾಗಗಳು. ನಾನು ಯಾವುದನ್ನು ಕಾಣುವುದೂ ಸಮೃದ್ಧಿಯ, ಅತಿಶಯದ ರೂಪದಲ್ಲಿ; ಹುಚ್ಚೆಬ್ಬಿಸುವ ಹರ್ಷ, ಕರಾಳ ಕ್ರೌರ್ಯ, ಆಳನೋವು, ಗಾಢ ಬೆಳವಣಿಗೆ, ಕಟ್ಟುಕಿತ್ತ ಕಾಮ, ಏಕಾಕಿತನ, ಐತಿಹ್ಯಾತ್ಮಕ ರಚನೆಗಳ, ಐತಿಹ್ಯಾತ್ಮಕ ಪಾತ್ರಗಳ ಅದ್ಭುತ ಹೋರಾಟಗಳು - ಇವೆಲ್ಲವನ್ನೂ ನಾನು ಸಂಭ್ರಮದಿಂದ ಆಚರಿಸುತ್ತೇನೆ.
 
ನನ್ನ ಮಟ್ಟಿಗೆ ಸಂಭ್ರಮಾಚರಣೆಯು ಅನುಭವದ ಪ್ರಾಥಮಿಕ ಗ್ರಹಣವಿಧಾನ. ಯಾಕೆಂದರೆ, ಸಂಭ್ರಮಾಚರಣೆಯಲ್ಲಿ ಏಕಕಾಲಕ್ಕೆ ವೈಯಕ್ತಿಕವೂ, ಸಾಮುದಾಯಿಕವೂ ಆದ ಸಂಗೀತ ಗುಣವಿದೆ. ಅದರ ಲಯ ಏಕಕಾಲಕ್ಕೆ ಆದಿಮವಾದದ್ದು ಹಾಗೂ ಸಮಕಾಲೀನವಾದದ್ದು. ವ್ಯಷ್ಟಿ ಮತ್ತು ಸಮಷ್ಟಿಗಳ ಬೆಸುಗೆಯಾದದ್ದು.

ಸಂಭ್ರಮಾಚರಣೆಯ ಮೂಲಕ ನಾನು `ಮಿಥ್ - ಮೇಕರ್~ನ ಕಾರ್ಯನಿರ್ವಹಿಸುತ್ತಿದ್ದೇನೆಂದು ನನ್ನ ನಂಬಿಕೆ. ಅನುಭವವನ್ನೊಂದು ಮಿಥ್ ಆಗಿ ಪರಿಗ್ರಹಿಸುವಾಗ ಮಾನವ ಬಾಲ್ಯಾವಸ್ಥೆಯಲ್ಲಿದ್ದ, `ಏಕ~ವಾಗಿದ್ದ ಆತ `ಬಹು~ವಿನೊಂದಿಗೆ ಅರ್ಥಪೂರ್ಣ ಸಂಬಂಧ ಕಟ್ಟಿಕೊಳ್ಳಲು ಪ್ರಯತ್ನಿಸಿದ; ಅಂತರಂಗ - ಬಹಿರಂಗಗಳೆರಡನ್ನೂ ಬೆಸೆಯಲು ಯತ್ನಿಸಿದ.

ಆತನ ಇಂತಹ ಪ್ರಯತ್ನದ ಒಟ್ಟು ರೂಪವೆ ಮಿಥ್ ಆಗಿತ್ತು. ಅದು ಆ ಪ್ರಯತ್ನವನ್ನು ಸರ್ವಾಂಗೀಣ ಫಲವಂತಿಕೆಯ ಪ್ರತೀಕದ ಮೂಲಕ ಆಚರಿಸಿತು. ಆಗ ಬಾಲಾವಸ್ಥೆಯಲ್ಲಿದ್ದ ಮಾನವ ಅನುಭವವನ್ನು ಅಮೂರ್ತೀಕರಿಸಲು ಹೋಗಲಿಲ್ಲ. ತತ್ವಚಿಂತನೆಯಲ್ಲಿ ತೊಡಗಿಸಿಕೊಳ್ಳಲಿಲ್ಲ.

ಮಿಥ್ ಆಚರಿಸಿದರೆ; ತತ್ವಶಾಸ್ತ್ರ ಚಿಂತಿಸುತ್ತದೆ. ಮಿಥ್, ಗ್ರಹಿಕೆಯನ್ನು ಬೆಳವಣಿಗೆಯಾಗಿ ನೋಡಿದರೆ, ತತ್ವಶಾಸ್ತ್ರವು `ಬಹು~ವನ್ನು `ಏಕ~ಕ್ಕೆ ಸೀಮಿತಗೊಳಿಸುವುದರ ಮೂಲಕ ಅದನ್ನು ಗ್ರಹಿಸಲು ಪ್ರಯತ್ನಿಸುತ್ತದೆ. ಬಹುರೂಪಗಳ ಹಿಂದಿರುವ ಏಕಸತ್ವವನ್ನು ಹುಡುಕಲೆತ್ನಿಸುತ್ತದೆ.

ಕವಿಯಾಗಿ ನಾನು ಬಹುರೂಪತೆಯನ್ನು ಅದರ ಎಲ್ಲ ಸಮೃದ್ಧಿಯಲ್ಲಿ ಒಪ್ಪಿಕೊಳ್ಳುತ್ತೇನೆ. ನಾವು ಭಾರತದಲ್ಲಿ ಇವತ್ತಿಗೂ ದೇವತೆಗಳೊಟ್ಟಿಗೆ ವ್ಯವಹರಿಸುತ್ತೇವಾದ್ದರಿಂದ, ಪ್ರೀತಿ - ಜಗಳಗಳನ್ನು ಆಡುತ್ತೇವಾದ್ದರಿಂದ ನಮ್ಮಲ್ಲಿ ಮಿಥ್ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ.

ನಮ್ಮಲ್ಲಿಯ ಪೂಜಾವಿಧಾನಗಳನ್ನು ಮೂಲತಃ ಸಹಭಾಜ್ಯತೆಯ ಕ್ರಿಯಾವಿಧಿಗಳು; ಅಲ್ಲಿ ಮಾನುಷ ಹಾಗೂ ಅತಿಮಾನುಷರಿಬ್ಬರೂ ಒಂದೇ ಸಂರಚನೆಯ ಎರಡು ಭಾಗಗಳು. ಈ ದೃಷ್ಟಿಯಿಂದ ನಾವು ನಿಜವಾಗಿಯೂ ಮಿಥಿಕಲ್ ಜನರು. ನಾನು ನಿಜವಾಗಿಯೂ ನನ್ನ ನೆಲದ ಕವಿಯಾಗಬೇಕೆಂದರೆ ಮಿಥಿಕಲ್ ಆಗುವುದು ಅನಿವಾರ್ಯ.

 ನಾನು ನನ್ನ ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತೇನೆ? ಸುಲಭವಾದದ್ದನ್ನು, ಅಪ್ರಾಮಾಣಿಕವಾದದ್ದೆಲ್ಲವನ್ನೂ ತಿರಸ್ಕರಿಸುವ ನವ್ಯವಾದದಂಥ ಚಳವಳಿಗಳ ಪರಿಚಯ ನನಗುಂಟು. ಸಮಕಾಲೀನ ಕನ್ನಡ ಸಾಹಿತ್ಯದ ಅನೇಕ ಅತ್ಯುತ್ಕೃಷ್ಟ ಲೇಖಕರ ಮೇಲೆ ನವ್ಯವಾದ ಮಾಡಿದ ಗಾಢ ಪ್ರಭಾವದ ಪರಿಚಯವೂ ನನಗುಂಟು. ಹಾಗೆ ನೋಡಿದರೆ ನನ್ನದೇ ಬರವಣಿಗೆಯ ಒಂದು ಪುಟ್ಟ ಭಾಗವು ಆ ಪ್ರಭಾವವನ್ನು ಪ್ರತಿಫಲಿಸುತ್ತದೆ.

ಇಂದು ಮಾತ್ರ ಅದೆಲ್ಲದರಿಂದ ಕೊಂಚ ದೂರ ನಿಂತು ನೋಡಿದಾಗ, ಪಶ್ಚಿಮದಿಂದ ನಮಗೆ ಬಂದಂತಹ ನವ್ಯವಾದದ ಸಂರಚನೆಗಳು ನಾನು ನನ್ನ ಪರಿಸರದೊಂದಿಗೆ ಸಂಬಂಧ ಕಟ್ಟಿಕೊಳ್ಳುವ ಕ್ರಿಯೆಗೆ ಅವಶ್ಯಕವಾದಂತಹ ಸಾಧನಗಳಲ್ಲವೇನೋ ಎಂದೆನಿಸುತ್ತದೆ.

ಎಲಿಯಟ್ ಮತ್ತು ಅವನ ಅನಾಥಪ್ರಜ್ಞೆ, ಅಸ್ತಿತ್ವವಾದ ಮತ್ತು ಅವರ ಅಬ್ಸರ್ಡ್ ಪ್ರಜ್ಞೆ, ಆದಿಮವಾದದ್ದನ್ನು ಬಗೆದು ಹುಡುಕಿಕೊಳ್ಳುವ ಯೂರೋಪಿಯನ್ ಪ್ರಯತ್ನ; ಸಂಸ್ಕೃತಿಯ ಲಕ್ಷಣಗಳನ್ನು ಹುಡುಕಿ ಗುರುತಿಸಿಕೊಳ್ಳುವಲ್ಲಿ ಅರ್ನಾಲ್ಡ್ ಅಥವಾ ಪೌಂಡ್ ರೀತಿಯ ಪ್ರಯತ್ನ; ಸಾರ್ತರನಿಂದ ಪ್ರಾರಂಭಿಸಿ ಹಿಪ್ಪಿಗಳವರೆಗಿನ ಆಧುನಿಕ ಪಾಶ್ಚಾತ್ಯ ಅನಾಥಪ್ರಜ್ಞೆ - ಇವೆಲ್ಲವುಗಳ ಸತ್ವ ವಾಸ್ತವವನ್ನು ನಾನು ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತೇನೆ. ಆದರೆ ಇವೆಲ್ಲವನ್ನೂ ನನ್ನ ಸ್ವಂತದ ಮಾರ್ಗಗಳನ್ನಾಗಿ ಮಾಡಿಕೊಳ್ಳುವುದರ ಬಗ್ಗೆ ನನಗೆ ನನ್ನದೇ ಆದ ಅನುಮಾನಗಳಿವೆ.

ಮಾನವ ಸ್ಥಿತಿಯ ಬಗ್ಗೆ ನಮ್ಮಲ್ಲೆ ಇರುವ ಪ್ರಶ್ನೆಗಳು ಆ ಎಲ್ಲ ಶ್ರೇಷ್ಠ ಯುರೋಪಿಯನ್ನರ ಪರಿಪ್ರೇಕ್ಷ್ಯಕ್ಕಿಂತ ಹೆಚ್ಚು ಮೂಲಭೂತವೂ, ಆ ಕಾರಣ ಹೆಚ್ಚು ಸಾರ್ವತ್ರಿಕವೂ ಅಲ್ಲವೇನು?
ಬರಹಗಾರನೊಬ್ಬನಿಗೆ ಯಾವತ್ತೂ ಅವನ ಕಾಲದ ಪ್ರಜ್ಞೆ ಮತ್ತು ಅವನ ಪ್ರದೇಶದ ಪ್ರಜ್ಞೆಯಿರುತ್ತದೆ. ಇರಬೇಕಾಗುತ್ತದೆ.
 
ವಾಸ್ತವವಾಗಿ ಬರಹಗಾರನ ಎಲ್ಲ ಸೃಷ್ಟಿಯನ್ನು ಪ್ರಭಾವಿಸುವ ಈ ಎರಡು ಮಹತ್ವದ ಆಯಾಮಗಳನ್ನು ಬೇರ್ಪಡಿಸುವುದು ಅಸಾಧ್ಯ. ಈ ದೇಶದಲ್ಲಿ ಇಂದು ಬರೆಯುತ್ತಿರುವ ಓರ್ವ ಲೇಖಕನಾಗಿ ನಾನು ಈ ಎರಡು ಆಯಾಮಗಳನ್ನು ನನ್ನದೇ ದೃಷ್ಟಿಕೋನದಿಂದ ನೋಡಬಯಸುತ್ತೇನೆ.

ನಾನು ನನ್ನ ಅನುಭವದ ಟೆಕ್ಸ್‌ಚರ್ ಅನ್ನು ಪಡೆದುಕೊಳ್ಳುವುದು ಮುಖ್ಯವಾಗಿ ನನ್ನ ಪ್ರದೇಶ ಪ್ರಜ್ಞೆಯ ಮುಖಾಂತರ. ಅದು ನನ್ನ ಬರವಣಿಗೆಯ ಮೂಲಧಾತುವಾಗಿರುತ್ತದೆ. ನನ್ನ ಅನುಭವದ ನೇಯ್ಗೆಯ ಎಳೆಎಳೆಯನ್ನೂ ಕಟ್ಟಿಕೊಡುತ್ತದೆ. ನನ್ನ ಕಾಲವನ್ನು ಮಾತ್ರವಲ್ಲ; ಬೇರೆ ಎಲ್ಲಾ ಕಾಲ್ಪನಿಕ ಆದರೆ ಅರ್ಥಪೂರ್ಣ ಕಾಲದ ರೂಪಗಳನ್ನೂ ಅದು ಒಳಗೊಳ್ಳುತ್ತದೆ. ಕಾಲಪ್ರಜ್ಞೆಗೆ ಹೆಚ್ಚು ಒತ್ತು ನೀಡುವುದನ್ನು ನಾನು ಅಷ್ಟಾಗಿ ಒಪ್ಪುವುದಿಲ್ಲ.

ಕಾಲಪ್ರಜ್ಞೆಯು ಅಮೂರ್ತವಾದುದು ಮತ್ತು ಬರಹಗಾರನಲ್ಲಿ ನ್ಯೂರೊಸಿಸ್‌ನ ರೂಪ ತಾಳಬಲ್ಲಂಥದ್ದು. ಪಶ್ಚಿಮದ ಸರಿಸಾಟಿಯಾಗಬೇಕೆಂಬ ಅಳುಬುರುಕ ಅಪೇಕ್ಷೆ ಇಂಥ ನ್ಯೂರೊಸಿಸ್‌ನ ಫಲವಾಗಿದೆ. ಮಾತ್ರವಲ್ಲ, ನಮ್ಮ ದುರ್ದೈವದ ವಸಾಹತುಶಾಹಿ ಅನುಭವದ ಭಾಗವೂ ಆಗಿದೆ.

ಬರಹಗಾರನಿಗೆ, ಚಿತ್ರ ಕಲಾವಿದನಿಗೆ, ಶಿಲ್ಪಿಗೆ ಎಲ್ಲರಿಗೂ ಪ್ರದೇಶವೇ ಮೂಲವಾದ, ನಿಜವಾದ, ತುರ್ತಿನ ಅನುಭವಕ್ಷೇತ್ರ. ಕಾಲಪ್ರಜ್ಞೆಯೆನ್ನುವುದು ಮಾತ್ರ ಬಹಳಷ್ಟು ಮಟ್ಟಿಗೆ ಕಲ್ಪನೆಯ ರೂಪದ್ದು, ನಾನು ಪ್ರಾಯಶಃ ಈ ವೈದೃಶ್ಯವನ್ನು ಕೊಂಚ ಸರಳೀಕರಿಸುತ್ತಿದ್ದೇನೆ.

ಆದರೆ ನಾನು ನನ್ನ ಬರವಣಿಗೆಯನ್ನು ಈ ರೀತಿಯಲ್ಲಿಯೇ ವಿವರಿಸ ಬಯಸುತ್ತೇನೆ. ಹಾಗಾಗಿ ಸಮಕಾಲೀನ ಮತ್ತು ಆಧುನಿಕದ ನಡುವಿನ ಭಿನ್ನತೆಗಳ ಬಗೆಗಿನ ಪಾಂಡಿತ್ಯಪೂರ್ಣ ಚರ್ಚೆಗಳು ನನ್ನ ಸೃಜನಶೀಲತೆಯ ಕೇಂದ್ರದಿಂದ ಕೊಂಚ ದೂರವಿರುವಂಥವು.

ನಾನು ನನ್ನ ಪ್ರದೇಶಕ್ಕೆ ಎಷ್ಟು ಸೇರಿದವನೋ ನನ್ನ ಕಾಲಕ್ಕೂ ಅಷ್ಟೇ ಸೇರಿದವನು, ಬೇರೆ ವಿಧಿಯಿಲ್ಲದಂತೆ, ನನ್ನ ವೈಯಕ್ತಿಕ ಅನುಭವದ ಸಾಪೇಕ್ಷ ಒತ್ತಡಗಳು ನನ್ನ ಬರವಣಿಗೆಯ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ನನ್ನ ಸಮಕಾಲೀನ ಕನ್ನಡ ಲೇಖಕರ ಮಧ್ಯೆ ನನ್ನ ವ್ಯಕ್ತಿವಿಶಿಷ್ಟತೆಯನ್ನು ಕಟ್ಟಿಕೊಡುತ್ತದೆ. ಪರಿಸರ ನನಗೆ ಅನುಭವವಾಗುವುದು ಮೂಲಭೂತವಾಗಿ ಮತ್ತು ಮುಖ್ಯವಾಗಿ ದೇಶಪ್ರಜ್ಞೆಯಾಗಿ.

 ನನ್ನ ಪ್ರದೇಶಪ್ರಜ್ಞೆಯ ಗಾಢತೆಗೆ ನನ್ನ ಸಾಮಾಜಿಕ ಹಿನ್ನೆಲೆಯೂ ಕೊಂಚ ಕಾರಣವಾಗಿದೆ. ನಾನು ಮೇಲುಜಾತಿಗೆ, ಅರ್ಥಾತ್ ಸಂಸ್ಕೃತ ಪ್ರಭಾವದ ಜಾತಿಗೆ ಸೇರಿದವನಲ್ಲ. ಆದ ಕಾರಣ ಮೇಲುಜಾತಿಯ ಪರಂಪರೆಯ ಮುಖ್ಯಮೂಲಾಂಶಗಳಾದ ಕಾಲ - ಕಾಲಾತೀತತೆ, ರೂಪ - ಸತ್ವ, ಜನ್ಮ - ಮೋಕ್ಷ ಇತ್ಯಾದಿ ವೈದೃಶ್ಯಗಳಿಂದ ನಾನು ದೂರ. ಮೂಲತಃ ಕಾಲಕೇಂದ್ರಿತವಾದ ಇಂಥ ಸಂರಚನೆ, ಪರಿಕಲ್ಪನೆಗಳಿಂದ ಅಬಾಧಿತನಾದ್ದರಿಂದ ನಾನು ಮಗುವಿನಂಥವನು.

ಮಗುವಿನಂತೆ ಇಂದ್ರಿಯ ಪ್ರಜ್ಞೆಯ ತತ್‌ಕ್ಷಣದ ಸಂವಹನದ ಶಕ್ತಿಗೆ ಪೂರಾ ಮರುಳಾಗಿರುವವನು. ನನ್ನ ಅನುಭವಗ್ರಹಿಕೆಯ ಕೇಂದ್ರದಲ್ಲಿರುವುದು ಬಹುತ್ವದ ಒಂದು ವರ್ಣಮಯ, ವೈಭವಸಮೃದ್ಧ ಪ್ರಜ್ಞೆ, ಹಾಗಾಗಿ ಮಿಥ್‌ಗಳನ್ನು ಸೃಷ್ಟಿಸುವಂತಹ ಮನೋಧರ್ಮಕ್ಕೆ ನಾನು ತುಂಬಾ ಹತ್ತಿರದಲ್ಲಿರುವಂಥವನು.

ಕೆಳಜಾತಿಯೊಂದಕ್ಕೆ ಸೇರಿದ ಅನಾನುಕೂಲವೆ ನನಗೆ ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. ಅನಕ್ಷರಸ್ಥರಾದ, ಶೋಷಿತರಾದ ನನ್ನ ಜನ ಜೀವಸಮೃದ್ಧ ಹಾಡುಗಳ ಮೂಲಕ ತಮ್ಮ ಅನುಭವವನ್ನು ಉಳಿಸಿಕೊಂಡರು, ಬೆಳೆಸಿಕೊಂಡರು. ಅವರಿಗೆ ಇಂದ್ರಿಯಾತ್ಮಕ ನೆನಪೇ ಜ್ಞಾನಸರ್ವಸ್ವವಾಗಿತ್ತು. ಹಾಗಾಗಿ ನನಗೆ - ಅವರ ಮಗನಿಗೆ - ಸಾಕ್ಷರತೆ ಮತ್ತು ಬರವಣಿಗೆ ಸಾಧ್ಯವಾದಾಗ ಅದು ಅವರಿಗೆ ಸಾಮಾನ್ಯವಾಗದೆ ಅಸಾಮಾನ್ಯ ಸಂತೋಷದ ವಿಷಯವಾಯಿತು.

ಈ ದೇಶದಲ್ಲಿ ಅಮೂರ್ತೀಕರಿಸುವ ಬ್ರಾಹ್ಮಣ್ಯದಿಂದ ಹಿಡಿದು ಮೂರ್ತಸಮಗ್ರತೆಯ ಶೂದ್ರತ್ವ ಅಥವಾ ಆದಿಮತೆಯವರೆಗೆ ಹರಡಿಕೊಂಡ ವೈವಿಧ್ಯ; ವಿಸ್ತಾರದ ಸಾಮಾಜಿಕ ಮತ್ತು ಬೌದ್ಧಿಕ ಸಂರಚನೆಗಳಿರುವ ಈ ದೇಶದಲ್ಲಿ, ಬೇರೆಡೆಯ ನಗರೀಕೃತ, ಅನಾಮಧೇಯ ಸಮಾಜದಲ್ಲಿ ಕಲ್ಪಿಸಿಕೊಳ್ಳಲು ಆಗದಂಥ ಶಕ್ತಿ ಮತ್ತು ಸಮೃದ್ಧಿಯೊಡನೆ ಇಲ್ಲಿನ ಪರಿಸರಕ್ಕೆ ಸ್ಪಂದಿಸಲು ಸಾಧ್ಯವಿದೆಯೆಂದು ನನ್ನ ನಂಬಿಕೆಯಾಗಿದೆ. ಮಿಥಿಕಲ್ ಮಾರ್ಗ ಇಲ್ಲಿ ಇನ್ನೂ ಅರ್ಥಪೂರ್ಣವಾದುದು, ವಾಸ್ತವವಾದುದು.

(1992ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಚಂದ್ರಶೇಖರ ಕಂಬಾರರು ಮಾಡಿದ ಇಂಗ್ಲಿಷ್ ಭಾಷಣದ ಕನ್ನಡ ರೂಪ. ಅನು: ಜಶವಂತ್ ಜಾಧವ್.)

ಕನ್ನಡದಲ್ಲಿ ನಾವು ಯಾಕೆ ಯೋಚಿಸುವುದಿಲ್ಲ?
ಬಹುಶಃ ಈ ಪ್ರಶ್ನೆಗೆ ಉತ್ತರವನ್ನು ನಮ್ಮ ಮನೋವೈಜ್ಞಾನಿಕ ಪರಿಭಾಷೆಯಲ್ಲಿ ಹುಡುಕಬೇಕಾಗುತ್ತದೆ. ಪ್ರತಿಯೊಂದು ಭಾಷೆಗೆ ಅದರದೇ ಆದ ಶಕ್ತಿಗಳಿರುತ್ತವೆ. ಪರಿಮಿತಿಗಳೂ ಇರುತ್ತವೆ. ಕನ್ನಡ ನಮಗೆ ಇಂದಿಗೂ ನಮ್ಮ ವಿಚಾರಗಳ ಭಾಷೆಯೇ ಅಲ್ಲ. ಕನ್ನಡ ಆ ಅರ್ಥದಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿಲ್ಲ.

ಕನ್ನಡ ನಮಗಿನ್ನೂ ಆಡುಮಾತು, ಅದೊಂದು ಭಾಷಾ ವ್ಯವಸ್ಥೆಯಲ್ಲ. ಇಂಗ್ಲಿಷ್ ಭಾಷೆ ಲ್ಯಾಟಿನ್ ಭಾಷೆಯ ಅವಲಂಬನವನ್ನು ಕಿತ್ತೊಗೆಯುವವರೆಗೆ ತನ್ನ ಸಂಭಾವ್ಯತೆಗಳನ್ನು ಕಂಡುಕೊಂಡಿರಲಿಲ್ಲ. ಕನ್ನಡಕ್ಕೆ ಈಗ ಸಂಸ್ಕೃತದ ಅವಲಂಬನ ಬೇಕಾಗಿಲ್ಲ ವಚನಕಾರರು ಅದನ್ನು ಕಿತ್ತೊಗೆದರು. ಈಗ ನಾವು ಇಂಗ್ಲಿಷನ್ನು ಅವಲಂಬಿಸಿದ್ದೇವೆ.

ಭಾಷೆ ಭಾಷಾಂತರವಾದರೆ ಸ್ವಂತ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಕನ್ನಡ ಭಾಷೆ ತಾನೇ ಯೋಚಿಸುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು. ಈ ಹವ್ಯಾಸ ಹುಟ್ಟಬೇಕಾದರೆ ಭಾಷೆ ಶಿಕ್ಷಣದ ಮಾಧ್ಯಮ ವಾಗಬೇಕು.

ಸಾಹಿತ್ಯವೊಂದರಲ್ಲಿ ಮಾತ್ರ ಭಾಷೆಯ ಸೃಜನಶೀಲವಾದ ಉಪಯೋಗವಾಗುತ್ತದೆಂಬ ತಪ್ಪುಗ್ರಹಿಕೆ ನಮ್ಮಿಂದ ದೂರವಾಗಬೇಕು. ಶಿಕ್ಷಣ ಕೂಡ ಒಂದು ಸೃಜನಶೀಲವಾದ ಕ್ರಿಯೆ.  ಶಿಕ್ಷಕ ಎಂದೂ ಪುಸ್ತಕವಾಗಬಾರದು. ವಿದ್ಯಾರ್ಥಿ ಓದುಗ ನಾಗಬಾರದು. ಶಿಕ್ಷಕನ ಭಾಷೆ ವಿದ್ಯೆಯನ್ನು ಸೃಷ್ಟಿಸುತ್ತಿರಬೇಕು.

ಶಿಕ್ಷಣದ ಮಾಧ್ಯಮ ಇಂಗ್ಲಿಷಿನಂಥ ಪರಿಭಾಷೆಯಾದರೆ ಈ ಸೃಜನಶೀಲತೆ ಸಾಧ್ಯವಾಗುವುದಿಲ್ಲ. ಅದಕ್ಕೆ ಕನ್ನಡವೇ ಶಿಕ್ಷಣದ ಮಾಧ್ಯಮವಾಗಬೇಕು. ಕನ್ನಡದಿಂದಲೇ ನಮ್ಮ ಮಕ್ಕಳ ತಿಳುವಳಿಕೆ ಅರಳಬೇಕು. ಆದರೆ ಶಿಕ್ಷಕನೊಬ್ಬನ ಸಂಕಲ್ಪದಿಂದಲೇ ಶಿಕ್ಷಣ ಮಾಧ್ಯಮ ಬದಲಾಗುವುದಿಲ್ಲ.

ನಾನು ಮೊದಲೇ ಹೇಳಿರುವಂತೆ ಶಿಕ್ಷಣ ವ್ಯವಸ್ಥೆ ರಾಜ್ಯದ ಜವಾಬ್ದಾರಿಯಾಗಿರುವುದರಿಂದ ಸರಕಾರವೂ ಮನಸ್ಸು ಮಾಡಬೇಕು. ಜನತೆಯೂ ಹೀಗೆಂದು ಬಯಸಬೇಕು; ಈ ಮೂರೂ ಸೇರಿದಾಗಲೇ ಕನ್ನಡ ಮಾಧ್ಯಮ ಸಾಧ್ಯ.

 (ಸೌಜನ್ಯ: `ದೇಶೀಯ ಚಿಂತನ~- ಕಂಬಾರರ ಲೇಖನಗಳು ಮತ್ತು ಭಾಷಣಗಳ ಸಂಕಲನ. ಪ್ರ: ಅಂಕಿತ ಪ್ರಕಾಶನ, ಬೆಂಗಳೂರು.)

ಕೃತಜ್ಞತೆ
ಕನ್ನಡದ ಮೊಟ್ಟಮೊದಲ ಸಾಹಿತ್ಯ ಪುರವಣಿಯನ್ನು ಆರಂಭಿಸುವಲ್ಲಿ `ಪ್ರಜಾವಾಣಿ~ಯ ಜೊತೆ ಕೈಜೋಡಿಸಿದ ಹೆಮ್ಮೆ `ದೇಶಕಾಲ~ಕ್ಕೆ ಇದೆ. ಇಂಥ ದಿಟ್ಟ ಪ್ರಯೋಗ ಭಾರತೀಯ ಭಾಷೆಗಳಲ್ಲಿ ಅಪರೂಪವಾದುದು. ಸಾಂಸ್ಕೃತಿಕ ಕೊಡುಗೆಯೂ ತನ್ನ ಕಾರ್ಯಕ್ಷೇತ್ರದ ಮುಖ್ಯ ಅಂಗವೆಂದು ಭಾವಿಸುವ ಪತ್ರಿಕೆಯಿಂದ ಮಾತ್ರ ಇಂಥ ಹೆಜ್ಜೆಯಿಡುವುದು ಸಾಧ್ಯ.

ಈವರೆಗೆ ಹೊರಬಂದ ಸಂಚಿಕೆಗಳಿಗೆ ಓದುಗರಿಂದ, ಲೇಖಕರಿಂದ, ಚಿಂತಕರಿಂದ ದೊರೆತ ಅಪಾರವಾದ ಉತ್ಸಾಹಪೂರ್ಣವಾದ ಪ್ರತಿಕ್ರಿಯೆ ಸಾಹಿತ್ಯ ಪುರವಣಿಯ ಯಶಸ್ಸಿಗೆ ಸಾಕ್ಷಿ.
ಕೆಲವು ಅನಿವಾರ್ಯ ವೈಯಕ್ತಿಕ ಕಾರಣಗಳಿಂದಾಗಿ ಸಾಹಿತ್ಯ ಪುರವಣಿಯ ಸಂಪಾದಕನಾಗಿ ಮುಂದುವರಿಯುವುದು ನನಗೆ ಸಾಧ್ಯವಾಗುತ್ತಿಲ್ಲ. 

ಪ್ರಸ್ತುತ ಸಂಚಿಕೆಯಿಂದಲೇ `ಪ್ರಜಾವಾಣಿ~ ಸಂಪಾದಕ ಬಳಗವು ಇದನ್ನು ಮುನ್ನಡೆಸಲು ಕೈಗೆತ್ತಿಕೊಂಡಿದೆ. ಈವರೆಗೆ ಲೇಖಕ ಓದುಗರಿಂದ ದೊರೆತ ಒತ್ತಾಸೆಯು ಇನ್ನು ಮುಂದೆಯೂ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ ಎಂಬ ವಿಶ್ವಾಸದಲ್ಲಿ ಈತನಕದ ಹಾದಿಯಲ್ಲಿ ಜೊತೆ ಕೊಟ್ಟ ಎಲ್ಲರಿಗೆ `ದೇಶಕಾಲ~ ದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೆನೆ. 
 -ವಿವೇಕ ಶಾನಭಾಗ

ಧನ್ಯವಾದ
`ಪ್ರಜಾವಾಣಿ~ ಕನ್ನಡ ಪತ್ರಿಕೋದ್ಯಮದಲ್ಲಿ ಹಿಂದಿನಿಂದಲೂ ನಿರ್ವಹಿಸಿರುವ ಸಾಂಸ್ಕೃತಿಕ ಹೊಣೆಗಾರಿಕೆಯ ಮತ್ತೊಂದು ಹೆಜ್ಜೆಯಾಗಿ `ಸಾಹಿತ್ಯ ಪುರವಣಿ~ ಯನ್ನು ಆರಂಭಿಸಿದಾಗ, ಅದಕ್ಕೆ ಜೊತೆಯಾಗಿದ್ದು `ದೇಶಕಾಲ~ ತ್ರೈಮಾಸಿಕ ಸಾಹಿತ್ಯ ಪತ್ರಿಕೆ. ವಿವೇಕ ಶಾನಭಾಗ ಅವರು ವಿನೂತನವಾಗಿ ರೂಪಿಸಿದ `ಸಾಹಿತ್ಯ ಪುರವಣಿ~ಯ ಇದುವರೆಗಿನ ಎಂಟು ಸಂಚಿಕೆಗಳೂ ನಾಡಿನಾದ್ಯಂತ ಪ್ರಶಂಸೆ ಪಡೆದಿವೆ. ಅನಿವಾರ್ಯ ಕಾರಣಗಳಿಂದಾಗಿ ಅವರು ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಅತ್ಯಂತ ಶ್ರದ್ಧೆ, ಅತೀವ ಆಸಕ್ತಿಗಳಿಂದ `ಸಾಹಿತ್ಯ ಪುರವಣಿ~ಯ ಕಾರ್ಯ ನಿರ್ವಹಿಸಿದ ವಿವೇಕ ಶಾನಭಾಗ ಅವರಿಗೆ `ಪ್ರಜಾವಾಣಿ~ ಹಾರ್ದಿಕ ಧನ್ಯವಾದ ಸಲ್ಲಿಸುತ್ತದೆ. 
 -ಸಂಪಾದಕ                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT