ಬಸವಕಲ್ಯಾಣ: ಇಲ್ಲಿ ಶುಕ್ರವಾರ ಬಸವಜ್ಯೋತಿ ಭಾವೈಕ್ಯ ಮೆರವಣಿಗೆ ನಡೆಸುವುದರೊಂದಿಗೆ ಎರಡನೆಯ ಬಸವ ಉತ್ಸವಕ್ಕೆ ಸಂಭ್ರಮದಿಂದ ಚಾಲನೆ ಕೊಡಲಾಯಿತು.
ಬಸವೇಶ್ವರ ದೇವಸ್ಥಾನದಿಂದ ಮತ್ತು ವಿವಿಧೆಡೆಯ ಶರಣ ಸ್ಥಳಗಳಿಂದ ಆಗಮಿಸಿದ ಜ್ಯೋತಿ ಹಾಗೂ ವಿವಿಧ ಧರ್ಮದವರು ತಂದ ಜ್ಯೋತಿಗಳ ಮಿಲನದೊಂದಿಗೆ ಮೆರವಣಿಗೆ ಆರಂಭಗೊಂಡಿತು. ಚಿಕ್ಕಮಗಳೂರು ಜಯಬಸವಾನಂದ ಸ್ವಾಮಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಮುಖ್ಯಜ್ಯೋತಿ ಹೊತ್ತಿಸಿ ಮೆರವಣಿಗೆಗೆ ಚಾಲನೆ ಕೊಟ್ಟರು.
ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮಿ, ಚಿಕ್ಕಮಗಳೂರು ಜಯಬಸವಾನಂದ ಸ್ವಾಮಿ, ಅಕ್ಕ ಅನ್ನಪೂರ್ಣ ಬೀದರ, ಬೆಲ್ದಾಳ ಸಿದ್ಧರಾಮ ಶರಣರು, ಬೇಲೂರು ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಗಣ್ಯರು ಅಲ್ಲಿ ನಿರ್ಮಿಸಲಾಗಿದ್ದ ಗ್ಯಾಲರಿಯಲ್ಲಿ ಕುಳಿತು ಪ್ರದರ್ಶನ ವೀಕ್ಷಿಸಿದರು.