ಬಸವಕಲ್ಯಾಣ: ಇಲ್ಲಿ ಅಕ್ಟೋಬರ್ 16, 17 ಮತ್ತು 18 ರಂದು ಕೂಡಲ ಸಂಗಮ ಬಸವಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ನೇತೃತ್ವದಲ್ಲಿ 12 ನೇ ಕಲ್ಯಾಣ ಪರ್ವ ನಡೆಯಲಿದೆ ಎಂದು ದೆಹಲಿಯ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸಸ್ತಾಪುರ ರಸ್ತೆಯಲ್ಲಿನ ಬಸವ ಮಹಾಮನೆಯಲ್ಲಿ ಈಚೆಗೆ ಹಮ್ಮಿಕೊಂಡ ಲಿಂ.ಜಗದ್ಗುರು ಲಿಂಗಾನಂದ ಸ್ವಾಮೀಜಿ ಸ್ಮರಣೋತ್ಸವ ಮತ್ತು ಕಲ್ಯಾಣ ಪರ್ವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಪ್ರಚಾರಕ್ಕಾಗಿ ರಾಜ್ಯದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ 8 ತಂಡಗಳನ್ನು ರಚಿಸಲಾಗಿದೆ ಎಂದರು. ಬಸವಣ್ಣ ಎಂದರೆ ನಂದಿ ಎಂದು ಜನರು ನಂಬಿದ್ದ ಕಾಲದಲ್ಲಿ ಲಿಂಗಾನಂದ ಸ್ವಾಮೀಜಿಯವರು ನಾಡಿನಾದ್ಯಂತ ಸತತವಾಗಿ ಪ್ರವಾಸ ಕೈಗೊಂಡು ಪ್ರವಚನ ನಡೆಸಿ ಜನರಲ್ಲಿನ ತಪ್ಪು ಕಲ್ಪನೆಯನ್ನು ದೂರ ಮಾಡಲು ಪ್ರಯತ್ನಿಸಿದರು ಎಂದು ಹೇಳಿದರು.
ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಲಿಂಗಾನಂದ ಅಪ್ಪಗಳ ಮಾತುಗಳಲ್ಲಿ ಚುಂಬಕ ಶಕ್ತಿ ಇತ್ತು.
ಬಸವಪ್ರಭು ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ವಿಶ್ವನಾಥ ದಳಪತಿ, ಆಂಧ್ರಪ್ರದೇಶ ರಾಜ್ಯಾಧ್ಯಕ್ಷ ಧನರಾಜ ಜೀಗರ್, ಶಿವರಾಜ ಪಾಟೀಲ ಅತಿವಾಳ ಮಾತನಾಡಿದರು.
ಚಂದ್ರಪ್ಪ ಪಾಟೀಲ ಗಾದಗಿ, ಶಂಕರೆಪ್ಪ ಪಾಟೀಲ, ಲಕ್ಷ್ಮಿಬಾಯಿ ಪಾಂಡ್ರೆ, ವಿದ್ಯಾಧರ ಕಾಮಶೆಟ್ಟಿ, ಗಿರಿಜಾ ಸಿದ್ಧಣ್ಣ, ಬಸವರಾಜ ಪಾಟೀಲ ಉಪಸ್ಥಿತರಿದ್ದರು. ಬಸವರಾಜ ಸಂಗಮದ ಸ್ವಾಗತಿಸಿದರು. ಆರ್.ಜಿ.ಶೆಟಗಾರ ನಿರೂಪಿಸಿದರು. ನಾಗಶೆಟ್ಟಿ ವಂದಿಸಿದರು.