ಕೃಷ್ಣರಾಜಪುರ: ಇಲ್ಲಿಗೆ ಸಮೀಪದ ಬಸವನಪುರದಲ್ಲಿ ನಿಧಾನಗತಿಯಲ್ಲಿ ಸಾಗಿರುವ ರಾಜಕಾಲುವೆ ಕಾಮಗಾರಿಯನ್ನು ಬಿಬಿಎಂಪಿ ಸದಸ್ಯೆ ಕೆ. ಪೂರ್ಣಿಮಾ ಪರಿಶೀಲಿಸಿದರು.
ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಅವರು, `ಒಂದನೇ ಹಂತದ ಕಾಮಗಾರಿಯನ್ನು ಗುತ್ತಿಗೆದಾರರು ಕಾಲಮಿತಿಯೊಳಗೆ ಮುಗಿಸಿದ್ದಾರೆ. ಆದರೆ, ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಲು ಕೃಷ್ಣ ಚಿತ್ರಮಂದಿರದ ಎದುರು ಟ್ರಾನ್ಸ್ಫಾರ್ಮರ್ ಅಡ್ಡಿಯಾಗಿದೆ~ ಎಂದು ಹೇಳಿದರು.
`ಕಳೆದ ಆರು ಆರು ತಿಂಗಳಿಂದಲೂ ಬೆಸ್ಕಾಂ ಅಧಿಕಾರಿಗಳಿಗೆ ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸಿ, ಕಾಮಗಾರಿ ಮುಂದುವರಿಸಲು ಸಹಕಾರ ಕೋರಿ ಪತ್ರ ಬರೆದಿದ್ದೆವು. ಆದರೆ, ಇದುವರೆಗೂ ಕ್ರಮ ಕೈಗೊಂಡಿಲ್ಲ. ಬೃಹತ್ ಮಳೆ ನೀರುಕಾಲುವೆ ಅಧಿಕಾರಿಗಳು ಟ್ರಾನ್ಸ್ಫಾರ್ಮರ್ ತೆಗೆಯಲು ಒತ್ತಾಯಿಸುತ್ತಿದ್ದಾರೆ. ಹೀಗಾಗಿ 10 ದಿನದೊಳಗೆ ಬೆಸ್ಕಾಂ ಟ್ರಾನ್ಸ್ ಫಾರ್ಮರ್ ಸ್ಥಳಾಂತರಗೊಳಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು~ ಎಂದು ಅವರು ಎಚ್ಚರಿಸಿದರು.
`ಬೆಂಗಳೂರು ಒನ್~ ಕೇಂದ್ರದ ಫಲಕ ತೆಗೆಯಲು ಮನವಿ
`ಬೆಂಗಳೂರು ಒನ್~ ಕೇಂದ್ರಕ್ಕೆ ಬೀಗ ಜಡಿದು 200 ದಿನಗಳಾಗಿವೆ. ಸಮುದಾಯ ಭವನದಲ್ಲಿ `ಬೆಂಗಳೂರು ಒನ್~ ಕೇಂದ್ರ ಸ್ಥಾಪನೆಗೆ ದಲಿತ ಮುಖಂಡರ ತೀವ್ರ ವಿರೋಧವಿದೆ. ಅವರೊಡನೆ ಮಾತುಕತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ `ಬೆಂಗಳೂರು ಒನ್~ ಕೇಂದ್ರದ ಫಲಕವನ್ನು ತೆಗೆಸಲು ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ ಎಂದರು.
ಗ್ರಾಮದ ಮುಖಂಡರಾದ ಗಜೇಂದ್ರ, ಗುರುರಾಜ್, ಮೋಹನ್, ರಾಜಗೋಪಾಲಚಾರಿ, ಕೇಶವ ಮತ್ತಿತರರು ಉಪಸ್ಥಿತರಿದ್ದರು.