ಹೊನ್ನಾಳಿ: ತಾಲ್ಲೂಕಿನ ದೊಡ್ಡೇರಿ ಗ್ರಾಮದ ಬಸವೇಶ್ವರ ಸ್ವಾಮಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ನಾಲ್ಕೈದು ದಿನಗಳಿಂದ ರಥೋತ್ಸವ ಸಂಬಂಧ ಪೂರ್ವಸಿದ್ಧತೆಗಳು ನಡೆದಿದ್ದವು. ರಥಕ್ಕೆ ಕಂಕಣಧಾರಣೆ, ದೇವರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜಾದಿ ಕಾರ್ಯಕ್ರಮಗಳು ನಡೆದಿದ್ದವು. ರಥೋತ್ಸವಕ್ಕೆ ದೊಡ್ಡೇರಿ ನವವಧುವಿನಂತೆ ಶೃಂಗಾರಗೊಂಡಿತ್ತು.
ಬುಧವಾರ ಬೆಳಗಿನ ಜಾವ ವಿವಿಧ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅಲಂಕೃತ ರಥದಲ್ಲಿ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು. ಭಕ್ತರು ಬಸವೇಶ್ವರ ಸ್ವಾಮಿಗೆ ಜಯಘೋಷ ಹಾಕುತ್ತಾ ರಥ ಎಳೆದು ಪುನೀತರಾದರು. ಗ್ರಾಮದ ಹನುಮಂತ ದೇವರು, ನೀಲಾಂಬಿಕಾ ದೇವಿಯರ ಉತ್ಸವ ಮೂರ್ತಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.
ರಥಕ್ಕೆ ಮಂಡಕ್ಕಿ, ಬಾಳೆಹಣ್ಣು, ಕಾಳುಮೆಣಸು ಇತ್ಯಾದಿ ಸಮರ್ಪಿಸಿ ಧನ್ಯತಾ ಭಾವ ಹೊಂದಿದರು. ರಥಕ್ಕೆ ಎರಚಿದ ಮೆಣಸಿನ ಕಾಳು, ಬಾಳೆಹಣ್ಣು ಸೇವಿಸಿದರೆ ಒಳ್ಳೆಯದು ಎಂಬ ಭಾವನೆ ಜನರಲ್ಲಿ ಇರುವ ಕಾರಣ, ಅವುಗಳನ್ನು ಸಂಗ್ರಹಿಸಲು ಭಕ್ತರಲ್ಲಿ ಸ್ಪರ್ಧೆಯೇ ಏರ್ಪಟ್ಟಿತ್ತು.
ಮುಖಂಡರಾದ ಡಿ.ಜಿ. ಚನ್ನವೀರಪ್ಪ, ಡಿ.ಜಿ. ವಿಶ್ವನಾಥ್, ಭಜನೆ ಚಂದ್ರಪ್ಪ, ಗಡೇಕಟ್ಟೇರ ಶೇಖರಪ್ಪ, ಚಂದ್ರಶೇಖರ್, ಡಿ.ಎಸ್. ಪರಮೇಶ್ವರಪ್ಪ, ಪಾರವ್ವಾರ ಸತೀಶ್, ಎಚ್. ಸಂತೋಷ್, ರಾಮಯ್ಯ, ಡಿ.ಎಸ್. ಕುಬೇಂದ್ರಪ್ಪ, ಎಂ.ಸಿ. ಹರೀಶ್ ಇದ್ದರು.