ಬೆಂಗಳೂರು: ನಾಗರಬಾವಿ 2ನೇ ಹಂತದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಬಸ್ ಘಟಕ (ಡಿಪೊ) ಮತ್ತು ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 3.30 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ₨ 7 ಕೋಟಿ ವೆಚ್ಚದ ನೂತನ ಬಸ್ ಘಟಕ ಮತ್ತು ನಿಲ್ದಾಣ ಮುಂದಿನ ಹತ್ತು ತಿಂಗಳಲ್ಲಿ ಕಾರ್ಯಾಚರಣೆಗೆ ಲಭ್ಯವಾಗಲಿದೆ ಎಂದು ಹೇಳಿದರು.
ಈ ಹೊಸ ನಿಲ್ದಾಣದಿಂದ ಬಸ್ಗಳು ಪ್ರತಿನಿತ್ಯ 80 ಮಾರ್ಗಗಳಲ್ಲಿ 602 ಟ್ರಿಪ್ಗಳಷ್ಟು ಸಂಚಾರ ನಡೆಸಲಿವೆ ಎಂದು ಅವರು ತಿಳಿಸಿದರು.
ಸಂಸ್ಥೆಯ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಶಿವನಪುರ, ಗುಂಜೂರು ಮತ್ತು ಕೊಡತಿ ಬಸ್ ಘಟಕಗಳಿಗೆ ಹೊಂದಿಕೊಂಡಂತೆ 120 ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಮೇಯರ್ ಬಿ.ಎಸ್.ಸತ್ಯನಾರಾಯಣ ಮಾತನಾಡಿ, ನರಸಿಂಹರಾಜ ಕಾಲೋನಿಯಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಇದೆ ಎಂದರು.
ಶಾಸಕ ಎಂ.ಮುನಿರತ್ನ ಅವರು ಮಾತನಾಡಿ, ‘ಮಹಾನಗರ ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಏಕರೂಪದ ಅನುದಾನ ಜಾರಿಯಲ್ಲಿದೆ. ಕ್ಷೇತ್ರಗಳ ಜನಸಂಖ್ಯೆ ಮತ್ತು ವ್ಯಾಪ್ತಿಯನ್ನು ಆಧರಿಸಿ ಅನುದಾನವನ್ನು ಹಂಚಿಕೆ ಮಾಡುವುದರಿಂದ ಕ್ಷೇತ್ರಗಳ ಅಭಿವೃದ್ಧಿಯನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರೇಗೌಡ, ಬಿಎಂಟಿಸಿ ವ್ಯವಸ್ಥಾಪಕರಾದ ನಿರ್ದೇಶಕ ಅಂಜುಂ ಪರ್ವೇಜ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.