ಮಡಿಕೇರಿ: ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳ ಬಸ್ಪಾಸ್ ದರವನ್ನು ವರ್ಷಂಪ್ರತಿ ಏರಿಕೆ ಮಾಡುತ್ತಿರುವುದಾಗಿ ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜೂನಿಯರ್ ಕಾಲೇಜು ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ರಾಜ್ಯ ಕಾರ್ಯದರ್ಶಿ ರಮೇಶ್ ಅವರು ಮಾತನಾಡಿ, ಸಾರಿಗೆ ಸಂಸ್ಥೆಯು ಲಾಭದಾಯಕವಾಗ್ದ್ದಿದು, ಸರ್ಕಾರ ಐಷಾರಾಮಿ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಬಸ್ಪಾಸ್ ದರ ಏರಿಕೆ ಮಾಡಿರುವುದಾಗಿ ಆರೋಪಿಸಿದರು.
ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ದಕ್ಕೆಯಾಗುತ್ತಿದ್ದು, ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಸಿದರು.
ಈ ಸಾಲಿನಲ್ಲಿ ನಿಗಧಿ ಪಡಿಸಿರುವ ಬಸ್ಪಾಸ್ ದರದಲ್ಲಿ ಶೇಕಡ 50 ರಷ್ಟು ಕಡಿಮೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಿರುವ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಡೆ ಬಸ್ ನಿಲುಗಡೆಗೆ ಕ್ರಮ ವಹಿಸಬೇಕೆಂದು ಆಗ್ರಸಿದರು.
ಹಾಗೆಯೇ ಕಾಲೇಜು ಆವರಣದಲ್ಲಿಯೇ ಅರ್ಹರಿಗೆ ವಾಹನ ಚಾಲನೆ ಪರವಾನಿಗೆ ನೀಡಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿಯ ಜಿಲ್ಲಾ ಸಂಚಾಲಕ ನವನೀತ್, ವಿದ್ಯಾರ್ಥಿ ಮುಖಂಡರುಗಳಾದ ಧನಂಜಯ್, ನಾಣಿ, ಜೀವನ್, ಲಕ್ಷ್ಮಿ ನಾರಾಯಣ್, ಇತರರು ಭಾಗವಹಿಸಿದ್ದರು.