ಮನಾಮ (ಐಎಎನ್ಎಸ್, ಪಿಟಿಐ): ಬಹರೇನ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರರು ರಾಜಧಾನಿ ಮನಾಮದಲ್ಲಿ ನಡೆಸುತ್ತಿರುವ ಹೋರಾಟ ಸೋಮವಾರವೂ ಮುಂದುವರಿದಿದೆ. ‘ದೇಶದ ಎಲ್ಲಾ ನಾಗರಿಕರಿಗೂ ಬಹರೇನ್ ಸರ್ಕಾರ ಉರುಳುವುದನ್ನು ಬಯಸುತ್ತಿದ್ದಾರೆ’ ಎಂದು ಪ್ರತಿಭಟನಾನಿರತರು ಪುನರುಚ್ಚರಿಸಿದ್ದಾರೆ.
ಒಂಬತ್ತು ದಿನಗಳಿಂದ ನಿರಂತರವಾಗಿ ಅಶಾಂತಿಯ ಕೇಂದ್ರವಾಗಿರುವ ಮನಾಮದ ಪರ್ಲ್ ಚೌಕದಲ್ಲಿ ನೂರಾರು ಪ್ರತಿಭಟನಾಕಾರರು ಸಾವಿರಾರು ನಾಗರಿಕರು ಜಮಾಯಿಸಿದ್ದಾರೆ ಎಂದು ಅಲ್-ಜಜೀರಾ ಟಿವಿ ವರದಿ ಮಾಡಿದೆ. ಇಡೀ ನಗರವೇ ಡೇರೆಗಳ ನಗರವಾಗಿ ಪರಿವರ್ತನೆಗೊಂಡಿದ್ದು, ಪ್ರತಿಭಟನಾಕಾರರು ಅಲ್ಲೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅದು ಹೇಳಿದೆ.
ಟ್ಯುನೀಶಿಯಾ ಹಾಗೂ ಈಜಿಪ್ಟ್ನಲ್ಲಿ ಇತ್ತೀಚೆಗೆ ನಡೆದ ಜನಾಂದೋಲನದಿಂದ ಪ್ರೇರಣೆಗೊಂಡು ಬಹರೇನ್ನ ನಾಗರಿಕರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಫೆಬ್ರುವರಿ 14ರಂದು ಆರಂಭಗೊಂಡ ಪ್ರತಿಭಟನೆಯಲ್ಲಿ ಇದುವರೆಗೆ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಇತರ ಹಲವಾರು ಜನರು ಗಾಯಗೊಂಡಿದ್ದಾರೆ.
ಈ ಮಧ್ಯೆ, ಪರ್ಲ್ ಚೌಕದಲ್ಲಿ ಉಳಿದುಕೊಳ್ಳಲು ಪ್ರತಿಭಟನಾಕಾರರಿಗೆ ಅವಕಾಶ ನೀಡಲಾಗುವುದು ಎಂದು ಬಹರೇನ್ ಯುವರಾಜ ಸಲ್ಮಾನ್ ಬಿನ್ ಹಮದ್ ಅಲ್-ಖಲೀಫಾ ಸಿಎನ್ಎನ್ಗೆ ಹೇಳಿದ್ದಾರೆ.
ಪ್ರತಿಭಟನೆ ನಿಯಂತ್ರಿಸಿ (ವಾಷಿಂಗ್ಟನ್ ವರದಿ): ಈ ಮಧ್ಯೆ, ಬಹರೇನ್ನ ನಡೆಯುತ್ತಿರುವ ಸರ್ಕಾರಿ-ವಿರೋಧಿ ಪ್ರತಿಭಟನೆಯನ್ನು ನಿಯಂತ್ರಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬಹರೇನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.