ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಅಧಿಕಾರಿಗಳಿಗೆ ಗೂಸಾ

Last Updated 17 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಕರ್ನಾಟಕ ಗೃಹ ಮಂಡಳಿಯ ನಿವೇಶನ ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಮತ್ತು ಅರ್ಹರನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಗೃಹ ಮಂಡಳಿ ಅಧಿಕಾರಿಗಳನ್ನು ಥಳಿಸಿದ ಘಟನೆ ಗದ್ದನಕೇರಿಯಲ್ಲಿ ಗುರುವಾರ ನಡೆಯಿತು.

ಬಾಗಲಕೋಟೆ ನಗರದ ಹೊರವಲಯದಲ್ಲಿ ಇರುವ ಗದ್ದನಕೇರಿಯಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ನೂತನ ಲೇಔಟ್‌ನಲ್ಲಿ 250 ನಿವೇಶನಗಳಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಸುಮಾರು 3 ಸಾವಿರ ಅರ್ಜಿ ಬಂದಿತ್ತು ಎನ್ನಲಾಗಿದೆ.

ಈಗಾಗಲೇ ಅರ್ಜಿ ಹಾಕಿದವರನ್ನು ಕೈಬಿಟ್ಟು, ಹರಾಜು ಪ್ರಕ್ರಿಯೆ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅರ್ಜಿ ಹಾಕದ ಅನರ್ಹರಿಗೆ ನಿವೇಶನಗಳನ್ನು ಮನಬಂದಂತೆ ನೀಡಲಾಗುತ್ತಿರುವುದು ಬೆಳಕಿಗೆ ಬಂದಾಗ, ಆಕ್ರೋಶಿತರಾದ ಸಾರ್ವಜನಿಕರು ನಿವೇಶನ ಹಕ್ಕುಪತ್ರ ಮತ್ತಿತರ ದಾಖಲೆ ಪತ್ರಗಳನ್ನು ಹರಿದುಹಾಕಿ ಅಧಿಕಾರಿಗಳಿಗೆ ಥಳಿಸಿದರು.

ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಬ್ಬನೇ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಇದ್ದ ಕಾರಣ ಅಧಿಕಾರಿಗಳಿಗೆ ಸಾರ್ವಜನಿಕರು ಥಳಿಸುವುದನ್ನು ತಡೆಯಲು ಅಸಾಧ್ಯವಾಯಿತು. ಥಳಿತದಲ್ಲಿ ತೀವ್ರವಾಗಿ ಬಳಲಿದ ಅಧಿಕಾರಿಗಳಿಗೆ ನೀರು ಕುಡಿಸಿ ಮತ್ತೆ ಥಳಿಸಿದ ಘಟನೆಯೂ ನಡೆಯಿತು.

ಕರ್ನಾಟಕ ಗೃಹ ಮಂಡಳಿಯ ಬೆಂಗಳೂರು ಕೇಂದ್ರ ಕಚೇರಿಯಿಂದ ಆಗಮಿಸಿದ್ದ ಜಿ. ಕಾಂತರಾಜು ಮತ್ತು ಉಮಾಶಂಕರ್ ಹಾಗೂ ಗದಗದ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಕೆ.ಎಲ್. ಕುಲಕರ್ಣಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇಲಾಖೆ ಮತ್ತು ಸಹಾಯಕ ಎಂಜಿನಿಯರ್ ನಂದಿ ಅವರುಗಳು ನಿವೇಶನ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಲಾಟರಿ ಎತ್ತುವಾಗ ಪಾರದರ್ಶಕವಾಗಿ ಮಾಡದೆ ಗೋಲ್‌ಮಾಲ್ ಮಾಡಿದರು ಎಂದು ಜನರು ಆರೋಪಿಸಿದರು.

ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ಥಳಿತಕ್ಕೊಳಗಾದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದರು.ಅಲ್ಲದೆ ನಿವೇಶನ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT