ನವದೆಹಲಿ (ಐಎಎನ್ಎಸ್): ನರ್ತನ ವ್ಯವಸ್ಥೆ ಇರುವ ಬಾರ್ ಗಳು ಸರ್ಕಾರದ ಸೂಕ್ತ ಅಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು ಎಂಬ ಷರತ್ತಿಗೆ ಒಳಪಟ್ಟು ತಮ್ಮ ನರ್ತನ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಬಾರ್ ನರ್ತಕಿಯರ ಹಕ್ಕನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಮತ್ತು ನ್ಯಾಯಮೂರ್ತಿ ಎಸ್.ಎಸ್. ನಿಜ್ಜರ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಬಾರ್ ನರ್ತಕಿಯರ ಹಕ್ಕನ್ನು ಎತ್ತಿ ಹಿಡಿದು, ಮೂರು ಸ್ಟಾರ್ ದರ್ಜೆಗಿಂತ ಕೆಳಗಿನ ಹೋಟೆಲ್ ಗಳಲ್ಲಿ ಬಾರ್ ನರ್ತನಕ್ಕೆ ಸಂಬಂಧಿಸಿದ ಪೊಲೀಸ್ ಆದೇಶವನ್ನು ರದ್ದು ಪಡಿಸಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತು.
ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿ ನಿಜ್ಜರ್ ಅವರು 19 (ಎ) ವಿಧಿಯನ್ವಯ ಬಾರ್ ನರ್ತಕಿಯರ ಹಕ್ಕಿನ ಪ್ರಶ್ನೆಯನ್ನು ತಾವು ಮುಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದರು.
ಪೊಲೀಸರ ತಾರತಮ್ಯದ ಆದೇಶವು ತಮ್ಮ ಬದುಕಿನ ಹಕ್ಕಿಗೆ ಚ್ಯುತಿ ತಂದಿದೆ ಎಂದು ಬಾರ್ ನರ್ತಕಿಯರು ವಾದಿಸಿದ್ದರು.
ಬಾರ್ ಗಳಲ್ಲಿ ನರ್ತಿಸುವುದರ ಹೊರತಾಗಿ ಬದುಕು ಸಾಗಿಸಲು ಆದಾಯ ಗಳಿಕೆಗೆ ಬೇರಾವುದೇ ವ್ಯವಹಾರ ತಮಗೆ ಗೊತ್ತಿಲ್ಲ ಎಂದೂ ಅವರು ಪ್ರತಿಪಾದಿಸಿದ್ದರು.