ಮೀರತ್ (ಪಿಟಿಐ): ಉತ್ತರಪ್ರದೇಶ ಮೀರತ್ ನ ಸುರಜ್ಕುಂಡ ಪ್ರದೇಶದಲ್ಲಿರುವ ‘ಬಾಲಮಂದಿರ’ದಿಂದ 44 ಯುವಕರು ಪರಾರಿಯಾಗಿದ್ದು, ಅದರಲ್ಲಿ 26 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸ್ನಾನದ ಕೊಠಡಿಯ ಗೋಡೆ ಒಡೆದು ಕಿಟಕಿ ಮೂಲಕ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಸಿವಿಲ್ ಲೈನ್ಸ್ ವೃತ್ತ ನಿರೀಕ್ಷಕ ವಿಕಾಸ್ ತ್ರಿಪಾಠಿ ತಿಳಿಸಿದ್ದಾರೆ.
‘ಬಾಲ ಮಂದಿರದಲ್ಲಿದ್ದ ಭದ್ರತಾ ಸಿಬ್ಬಂದಿಯ ನೆರವಿನಿಂದ 26 ಜನರನ್ನು ಬಂಧಿಸಲಾಗಿದೆ. 18 ಇನ್ನೂ ಕಾಣೆಯಾಗಿದ್ದು, ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ’ ಎಂದು ಅವರು ತಿಳಿಸಿದರು.
ಬಾಲಮಂದಿರದಲ್ಲಿ ಒಟ್ಟು 175 ಯುವಕರಿದ್ದಾರೆ ಎಂದೂ ತ್ರಿಪಾಠಿ ತಿಳಿಸಿದ್ದಾರೆ.
ಕೊಲೆ, ಅಪಹರಣ ಹಾಗೂ ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಡಿ ಬಂಧಿತರಾಗಿದ್ದ ಮೂವರು ಆರೋಪಿಗಳು ಹೋಮ್ ಗಾರ್ಡ್ ಒಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಬಗ್ಗೆ ಬುಧವಾರ ಸಂಜೆ ವರದಿಯಾಗಿತ್ತು.
ಇನ್ನು, ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ತನಿಖೆ ನಡೆಸುವಂತೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ನಗರ) ಆದೇಶಿಸಿದ್ದಾರೆ.
ಕಳೆದೊಂದು ವರ್ಷದಲ್ಲಿ ಇಲ್ಲಿನ ಬಾಲ ಮಂದಿರದಿಂದ ಸುಮಾರು 50ಕ್ಕೂ ಹೆಚ್ಚು ಯುವಕರು ತಪ್ಪಿಸಿಕೊಂಡಿದ್ದಾರೆ.