ಬೆಂಗಳೂರು: `ಬಿಜೆಪಿಯ ಕೆಲವು ಮುಖಂಡರೇ ವೀರಶೈವ ಸಮಾಜವನ್ನು ಒಡೆಯುವ ಯತ್ನ ನಡೆಸಿದ್ದಾರೆ~ ಎಂದು ಯಡಿಯೂರಪ್ಪ ಅವರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, `ಯಡಿಯೂರಪ್ಪನವರು ಈ ಆರೋಪ ಮಾಡಿದ್ದು ನನ್ನನ್ನು ಉದ್ದೇಶಿಸಿ ಅಲ್ಲ~ ಎಂದು ಹೇಳಿದ್ದಾರೆ. `ಆರೋಪದ ಕುರಿತು ಯಡಿಯೂರಪ್ಪನವರ ಜೊತೆ ಚರ್ಚಿಸುವೆ~ ಎಂದು ಈಶ್ವರಪ್ಪ ಅವರೂ ತಿಳಿಸಿದ್ದಾರೆ.
ಗೃಹ ಕಚೇರಿ `ಕೃಷ್ಣಾ~ದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡರು, `ಯಡಿಯೂರಪ್ಪನವರು ಅಂಥ ಆರೋಪ ಮಾಡುವಾಗ ನನ್ನ ಹೆಸರು ಹೇಳಿಲ್ಲ. ಅವರ ಜೊತೆ ನಾನು ಭಿನ್ನಾಭಿಪ್ರಾಯವನ್ನೂ ಹೊಂದಿಲ್ಲ. ಬಜೆಟ್ ಕುರಿತು ಅವರಿಂದ ಸಲಹೆ, ಸೂಚನೆ ಪಡೆಯುತ್ತೇನೆ~ ಎಂದು ತಿಳಿಸಿದರು.
ಸಾವಯವ ಕೃಷಿ ಕುರಿತು ವಿಧಾನಸೌಧದಲ್ಲಿ ಗುರುವಾರ ನಡೆಯಲಿರುವ ಸಮ್ಮೇಳನದಲ್ಲೂ ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ ಎಂದ ಮುಖ್ಯಮಂತ್ರಿಗಳು, `ಅವರು ಗುರುವಾರ ನಡೆಸಲು ಉದ್ದೇಶಿಸಿರುವ ಶಾಸಕರ ಸಭೆ ಕುರಿತು ನನ್ನಲ್ಲಿ ಯಾವುದೇ ಮಾಹಿತಿ ಇಲ್ಲ~ ಎಂದು ಉತ್ತರಿಸಿದರು.
ಯಡಿಯೂರಪ್ಪನವರು ಮಾಡಿರುವ ಆರೋಪದ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, `ಅವರು ಏಕೆ ಹೀಗೆ ಮಾತನಾಡಿದ್ದಾರೆ ಎನ್ನುವುದು ತಿಳಿದಿಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುತ್ತೇನೆ~ ಎಂದರು.