ಎಚ್.ಡಿ. ಕೋಟೆ: ದೇಶದೆಲ್ಲೆಡೆ ಮೋದಿ ಅಲೆ ಎದ್ದಿರುವುದಕ್ಕೆ ಭಾನುವಾರ ನಡೆದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶವೇ ಸಾಕ್ಷಿ ಎಂದು ಭಾರತೀಯ ಜನತಾ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಯೋಗೀಶ್ಕುಮಾರ್ ಅಭಿಪ್ರಾಯಪಟ್ಟರು .
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ದೇಶದಾದ್ಯಂತ ಸಂಚರಿಸಿ ಒಂದು ಪ್ರಚಂಡ ಅಲೆ ಎಬ್ಬಿಸಿದ್ದಾರೆ. ಈ ಅಲೆ ಸಹಿಸದ ಕೆಲ ವಿರೋಧಿಗಳು ಇದೊಂದು ಪೊಳ್ಳು ಅಲೆ ಚುನಾವಣೆಯಲ್ಲಿ ಇದೇನೂ ಪರಿಣಾಮ ಬೀರುವುದಿಲ್ಲ ಎಂದು ಲೇವಡಿ ಮಾಡಿದ್ದರು. ಈ ಫಲಿತಾಂಶ ಅವರಿಗೆ ತಕ್ಕ ಉತ್ತರ ನೀಡಿದೆ ಎಂದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪಕ್ಷದ ಬಾವುಟ ಪ್ರದರ್ಶಿಸಿ ವಿಜಯೋತ್ಸವ ಆಚರಿಸಿದರು.
ಮುಖಂಡರಾದ ಪುಟ್ಟೇಗೌಡ, ರಘು, ಚನ್ನಾಚಾರ್, ಪ್ರ. ಕಾರ್ಯದರ್ಶಿ ಟೈಗರ್ಬ್ಲಾಕ್ನ ಆರ್. ಚಂದ್ರಶೇಖರ್, ಉಪಾಧ್ಯಕ್ಷ ಸೋಮಾಚಾರ್, ಸತ್ಯನಾರಾಯಣ್, ಪ್ರಕಾಶ್, ನಂದೀಶ್, ಕುಮಾರ್ ನಾಗೇಂದ್ರ, ಸುರೇಶ್, ವೆಂಕಟೇಶ್, ಪ್ರಸಾದ್, ಗುರುಸ್ವಾಮಿ ಇದ್ದರು.
‘ಬಿಜೆಪಿ ವಿರೋಧಿಗಳಿಗೆ ತಕ್ಕ ಉತ್ತರ’
ಬನ್ನೂರು: ಕಾಂಗ್ರೆಸ್ನ ದುರಾಡಳಿತ ಧಿಕ್ಕರಿಸಿದ ಮತದಾರರು ಪಂಚ ರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ನುಗ್ಗಳ್ಳಿಕೊಪ್ಪಲು ರಾಮಚಂದ್ರ ತಿಳಿಸಿದರು.
ಬನ್ನೂರಿನ ಬಸ್ ನಿಲ್ದಾಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ದುರಾಡಳಿತ, ಬೆಲೆ ಏರಿಕೆ ಹಾಗೂ ಮಿತಿಮೀರಿದ ಭ್ರಷ್ಟಾಚಾರದ ವಿರುದ್ದ ಮತದಾರರು ರೊಚ್ಚಿಗೆದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ 272 ಸ್ಥಾನಗಳಿಗಿಂತಲು ಹೆಚ್ಚು ಸ್ಥಾನ ಗಳಿಸಿ, ಸ್ವತಂತ್ರವಾಗಿ ದೇಶದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.
ಪುರಸಭಾ ಮಾಜಿ ಸದಸ್ಯರಾದ ಪ್ರಭಾಕರ್, ಮಾಕನಳ್ಳಿ ಅಶೋಕ್, ಸೋಮನಾಥಪುರ ಶಕ್ತಿ ಕೇಂದ್ರದ ಅಧ್ಯಕ್ಷ ಅತ್ತಳ್ಳಿ ಗಿರೀಶ್, ಅತ್ತಳ್ಳಿ ಚಂದ್ರು, ಬನ್ನೂರು ರವಿ, ಹೆಗ್ಗೂರು ರಂಗರಾಜು, ವಿಜಯಕುಮಾರ್, ಮಾದಯ್ಯ, ಕಿರಣ್, ಪ್ರಕಾಶ್, ಶಿವಣ್ಣ, ಪುಟ್ಸಾಮಿ, ಮಹೇಶ್, ಜ್ಞಾನೇಶ್, ಮುನಾವರ ಪಾಷಾ ಇದ್ದರು.