ಬೆಂಗಳೂರು: ಬಹಳ ದಿನಗಳ ಬಳಿಕ ಆಡಳಿತಾರೂಢ ಬಿಜೆಪಿ ಪ್ರಮುಖರ ಸಭೆ (ಕೋರ್ ಕಮಿಟಿ) ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ರಾತ್ರಿ ನಡೆಯಿತು.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖಂಡರಾದ ಸಂತೋಷ್, ಸತೀಶ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.
ಸಭೆ ನಂತರ ಈಶ್ವರಪ್ಪ ಸುದ್ದಿಗಾರರ ಜತೆ ಮಾತನಾಡಿ, `ಪಕ್ಷ ಸಂಘಟನೆ ಕುರಿತು ಮುಖಂಡರ ಜತೆ ಮಾತುಕತೆ ನಡೆಸಿದ್ದು, ಇದೇ 27ರಿಂದ ವಿಭಾಗ ಮಟ್ಟದ ಸಮಾವೇಶ ಆಯೋಜಿಸಲಾಗುವುದು~ ಎಂದರು.
ಇದೇ 30ರಂದು ಪಕ್ಷ ಸಂಘಟನೆ ಕುರಿತು ಪ್ರಮುಖರ ಜತೆ ಚರ್ಚಿಸಲಾಗುವುದು. ಫೆ. 3 ರಂದು ಹಿಂದುಳಿದ ಮುಖಂಡರ ಸಭೆ ನಡೆಸಲು ತೀರ್ಮಾನಿಸಲಾಯಿತು.
ಸದಾನಂದ ಗೌಡರ ರಾಜೀನಾಮೆಯಿಂದ ತೆರವಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆಯಾಯಿತು ಎನ್ನಲಾಗಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸುನೀಲಕುಮಾರ್ ಅವರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಕೇಶವ, ಉದಯಕುಮಾರ ಶೆಟ್ಟಿ ಮತ್ತು ಎಂ.ಕೆ.ಪ್ರಾಣೇಶ್ ಅವರ ಹೆಸರು ಪ್ರಸ್ತಾಪವಾಗಿವೆ ಎನ್ನಲಾಗಿದೆ.