ಶಿವಮೊಗ್ಗ: `ಡಿಸೆಂಬರ್ 10 ರಂದು ಘೋಷಣೆ ಮಾಡುವ ಪ್ರಾದೇಶಿಕ ಪಕ್ಷಕ್ಕೆ ಹಳೆಯ ಕಾರ್ಯಕರ್ತರೆಲ್ಲರೂ ಬಿಜೆಪಿ ವ್ಯಾಮೋಹ ತೊರೆದು ನನ್ನ ಜತೆ ಬನ್ನಿ, ಹೊಸ ಬದಲಾವಣೆ ತರೋಣ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಹ್ವಾನ ನೀಡಿದರು.
ನಗರದ ಸಾಗರ ರಸ್ತೆಯ ಪಿಇಎಸ್ ಕಾಲೇಜಿನ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ `ಪರಾಮರ್ಶೆಯ ಪರಿಕ್ರಮ, ನಿಮ್ಮ ಸಮಕ್ಷಮ~ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ನೆರದಿದ್ದ ಸಹಸ್ರಾರು ಜನರ ಎದುರು ಬಿಚ್ಚಿಟ್ಟರು.
`ನನ್ನನ್ನು ಅಪರಾಧಿಯನ್ನಾಗಿ ಬಿಂಬಿಸಿ, ಅವಮಾನಗೊಳಿಸಿದ ಪಕ್ಷದಲ್ಲಿ ಇರಲು ಸಾಧ್ಯವೇ ಇಲ್ಲ~ ಎಂದು ಅವರು ಪುನರುಚ್ಚರಿಸಿದರು.
ಮಾತಿನ ಉದ್ದಕ್ಕೂ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, `ದೊಡ್ಡವರ ಸಣ್ಣತನದಿಂದ ಬೇಸತ್ತು ಈ ಪಕ್ಷದಿಂದ ಹೊರಗೆ ಬರುತ್ತಿದ್ದೇನೆ. ಯಾವುದೇ ಕುರ್ಚಿ ಆಸೆಗಾಗಿ ಅಲ್ಲ~ ಎಂದು ಸ್ಪಷ್ಟಪಡಿಸಿದರು.
`ಜನಸಂಘದಿಂದ ಹಿಡಿದು 40 ವರ್ಷಗಳ ಕಾಲ ಓಡಾಡಿ ಪಕ್ಷವನ್ನು ಕಟ್ಟಿದ್ದೇನೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಬರುವುದಿಲ್ಲ ಎಂಬುದನ್ನು ಸುಳ್ಳು ಮಾಡಿ ತೋರಿಸಿದ್ದೇನೆ. ನನ್ನ ನೇತೃತ್ವದಲ್ಲಿ 110 ಸ್ಥಾನ ಪಡೆದು, 24 ಗಂಟೆಗಳ ಒಳಗಡೆ ಬಹುಮತ ತೋರಿಸಿ, ಮೂರೂ ಕಾಲು ವರ್ಷ ಉತ್ತಮ ಆಡಳಿತ ನೀಡಿದೆ. ಇದು ತಪ್ಪಾ~ ಎಂದು ಪ್ರಶ್ನಿಸಿದರು.
`ನನ್ನ ಜನಪ್ರಿಯತೆಯನ್ನು ಸಹಿಸದೆ ರಾಷ್ಟ್ರ ಮತ್ತು ರಾಜ್ಯ ನಾಯಕರು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಜತೆಗೂಡಿ ಷಡ್ಯಂತ್ರ ನಡೆಸಿ, ನನ್ನನ್ನು ಅಪರಾಧಿಯನ್ನಾಗಿ ಮಾಡಿ, ಅಧಿಕಾರ ಕಿತ್ತುಕೊಂಡರು~ ಎಂದು ಆಕ್ರೋಶ ವ್ಯಕ್ತಪಡಿಸಿದರು.