ರಾಜ್ಯಸಭೆಗೆ ಸ್ಥಳೀಯರಲ್ಲದ ಖ್ಯಾತ ತಾರೆ ಮತ್ತು ನೃತ್ಯಗಾರ್ತಿ ಹೇಮಾಮಾಲಿನಿಯವರನ್ನು ಬಿಜೆಪಿ ಆಯ್ಕೆ ಮಾಡಿರುವುದಕ್ಕೆ ಹೆಚ್ಚಿದ ವಿರೋಧಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ‘ಹೇಮಾಮಾಲಿನಿ ಭಾರತೀಯರಲ್ಲವೇ’ ಎಂದು ಗುಟುರು ಹಾಕಿದ್ದಾರೆ.
ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ತಾರೆ ವೈಜಯಂತಿಮಾಲಾ ‘ಮದ್ರಾಸ್ ಪಶ್ಚಿಮ’ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದಾಗ, ಈ ‘ದೇಶಭಕ್ತರು’ ಟೀಕೆ ಮಾಡುತ್ತಾ, ‘ಸ್ಫುರದ್ರೂಪಿ ನೃತ್ಯಾಂಗನೆಯ ಮುಖವನ್ನು ತೋರಿಸಿ ಚುನಾವಣೆ ಗೆಲ್ಲಬೇಡಿ, ನಿಮ್ಮ ಪಕ್ಷದ ಪ್ರಣಾಳಿಕೆ ಆಧಾರದ ಮೇಲೆ ಚುನಾವಣೆ ಗೆಲ್ಲಿ, ನೋಡೋಣ’ ಎಂದಿದ್ದರು.
ಹಾಗೆಯೇ, ಸಿ.ಎಂ. ಸ್ಟೀಫನ್ ಗುಲ್ಬರ್ಗದಿಂದ, ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ, ಸೋನಿಯಾ ಗಾಂಧಿ ಬಳ್ಳಾರಿಯಿಂದ, ಪ್ರಧಾನಿ ಮನಮೋಹನಸಿಂಗ್ ಅಸ್ಸಾಂನಿಂದ ಸಂಸತ್ತಿಗೆ ಆಯ್ಕೆಯಾದಾಗಲೂ, ‘ಅವರು ಸ್ಥಳೀಯರಲ್ಲ, ಹೊರಗಿನವರು’ ಎಂದು ‘ರಾಷ್ಟ್ರಭಕ್ತರು’ ಹೀಗಳೆದಿದ್ದರು. ಅಷ್ಟೇ ಅಲ್ಲ, ಮುಖ್ಯಮಂತ್ರಿಯ ಆಯ್ಕೆ ‘ಹೈಕಮಾಂಡ್ಗೆ ಬಿಟ್ಟಿದ್ದು’ ಎಂದು ಕಾಂಗ್ರೆಸ್ ಹೇಳಿದಾಗ ‘ಇದು ಜನತೆ ಆರಿಸಿದ ಸದಸ್ಯರಿಗೆ ಆದ ಅಪಮಾನ’ ಎಂದು ಟೀಕಿಸಿದ್ದರು. ಆದರೆ ಇದೇ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಬಿಜೆಪಿ ನಾಯಕರಿಗೆ ಹಿಂದೆ ಮಾತಾಡಿದ್ದೆಲ್ಲ ಮರೆತು ಹೋಗಿದೆ. ಪಾಪ, ಅವರಿಗೆ ಜಾಣ ಮರೆವು!