ಲಖನೌ (ಪಿಟಿಐ): ಆಗ್ರಾದಲ್ಲಿ ಭಾನುವಾರ ಪಕ್ಷದ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ವರುಣ್ ಗಾಂಧಿ ಅವರ ನೇತೃತ್ವದಲ್ಲಿ ‘ರೈತರ ರ್ಯಾಲಿ’ ಆಯೋಜಿಸಲು ಬಿಜೆಪಿಗೆ ನೀಡಿದ್ದ ಅನುಮತಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಬಿಜೆಪಿ ಮೂಲಗಳ ಪ್ರಕಾರ, ಆಗ್ರಾದ ಫತೇಪುರ್ ಸಿಕ್ರಿ ಪ್ರದೇಶದ ಅಲೋಕಾ ಗ್ರಾಮದಲ್ಲಿ ‘ರೈತರ ಸ್ವಾಭಿಮಾನಿ’ ರ್ಯಾಲಿ ಏರ್ಪಡಿಸಲು ಎಂಟು ತಿಂಗಳ ಹಿಂದೆಯೇ ಜಿಲ್ಲಾಡಳಿತ ಲಿಖಿತ ಅನುಮತಿ ನೀಡಿತ್ತು. ಆದರೆ ದಿಢೀರ್ ಆಗಿ ಗುರುವಾರ ರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದ ಅನುಮತಿ ರದ್ದುಗೊಳಿಸಿರುವ ಮಾಹಿತಿಯನ್ನು ಪಕ್ಷಕ್ಕೆ ನೀಡಿದ್ದಾರೆ.
‘ಇದೊಂದು ರೈತರ ರ್ಯಾಲಿಯಾಗಿದ್ದು, ಯಾವುದೇ ರಾಜಕೀಯ ಅಜೆಂಡಾ ಇರಲಿಲ್ಲ. ಆದರೆ ಈಗ ಅನುಮತಿ ನಿರಾಕರಿಸಿರುವುದು ಪ್ರಜಾಪ್ರಭುತ್ವ ಸ್ವಾತಂತ್ರ್ವವನ್ನು ತುಳಿಯುವ ಹುನ್ನಾರವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.