ಹುಬ್ಬಳ್ಳಿ: `ದೇಶದಾದ್ಯಂತ ರೈತರು ಎದುರಿಸುತ್ತಿರುವ ಸಮಸ್ಯೆಗಳ ವಿಷಯವಾಗಿ ಚರ್ಚಿಸಲು ಬಿಜೆಪಿಯ ರೈತ ಮೋರ್ಚಾ ಮೇ 12 ಮತ್ತು 13ರಂದು ನವದೆಹಲಿಯಲ್ಲಿ ರೈತರ ಸಂಸತ್ ಏರ್ಪಡಿಸಿದೆ~ ಎಂದು ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಯಸಿಂಗರಾವ್ ಗಾಯಕವಾಡ್ ಪಾಟೀಲ ಮಂಗಳವಾರ ಹೇಳಿದರು.
`ಕೃಷಿ ಆಯೋಗದ ಮಾಜಿ ಅಧ್ಯಕ್ಷ ಎಂ.ಎಸ್. ಸ್ವಾಮಿನಾಥನ್, ಪತ್ರಕರ್ತ ಪಿ.ಸಾಯಿನಾಥ್, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಮುಖಂಡರಾದ ಅರುಣ್ ಜೈಟ್ಲಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಂಸತ್ನಲ್ಲಿ ಪಾಲ್ಗೊಳ್ಳಲಿದ್ದಾರೆ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ದೇಶದ ರೈತರು ಎದುರಿಸುತ್ತಿರುವ ಸವಾಲುಗಳು, ಸರ್ಕಾರಿ ನೀತಿಗಳು, ಅನಿಶ್ಚಿತ ಮಾರುಕಟ್ಟೆ, ಕುಸಿತಗೊಂಡ ರೈತರ ವರಮಾನ, ಬರ ಪರಿಸ್ಥಿತಿಯ ಅಸಮರ್ಪಕ ನಿರ್ವಹಣೆ, ಭೂಸ್ವಾಧೀನ ಮತ್ತು ಬೀಜ ಮಸೂದೆ ಸೇರಿದಂತೆ ರೈತ ಸಮುದಾಯವನ್ನು ಕಾಡುತ್ತಿರುವ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಒಳಗಾಗಲಿವೆ~ ಎಂದು ಅವರು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಉದ್ದೇಶಿತ ಭೂಸ್ವಾಧೀನ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, `ರಾಜ್ಯದ ಬಿಜೆಪಿ ಸರ್ಕಾರವೂ ಅದೇ ಹಾದಿಯಲ್ಲಿ ನಡೆಯುತ್ತಿದೆಯಲ್ಲ~ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ. `ಫಲವತ್ತಾದ ಭೂಮಿಯನ್ನು ರೈತರಿಂದ ವಶಕ್ಕೆ ಪಡೆಯಬಾರದು ಹಾಗೂ ಕೈಗಾರಿಕೆ ಸ್ಥಾಪನೆಯಾಗದ ಭೂಮಿಯನ್ನು ರೈತರಿಗೆ ವಾಪಸು ನೀಡಬೇಕು~ ಎಂದು ಆಗ್ರಹಿಸಿದರು.