ಬೆಂಗಳೂರು: ಬಿಬಿಎಂಪಿಯ ಬನಶಂಕರಿ ದೇವಸ್ಥಾನ ವಾರ್ಡ್ ಉಪ ಚುನಾವಣೆಗೆ ಭಾನುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಒಟ್ಟು ಶೇ 53.37ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಮತಗಟ್ಟೆ 8ರಲ್ಲಿ ಅತಿ ಹೆಚ್ಚು ಅಂದರೆ ಶೇ 66.81ರಷ್ಟು ಮತದಾನವಾಗಿದ್ದರೆ, ಮತಗಟ್ಟೆ 17ರಲ್ಲಿ ಶೇ 40ರಷ್ಟು ಅತಿ ಕಡಿಮೆ ಮತದಾನವಾಗಿದೆ.
ವಾರ್ಡ್ನಾದ್ಯಂತ ಸ್ಥಾಪಿಸಲಾಗಿದ್ದ 34 ಮತ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಯಿತು. ಆದರೆ ಮಧ್ಯಾಹ್ನದವರೆಗೂ ಮತದಾನ ನೀರಸವಾಗಿತ್ತು.
ಮಧ್ಯಾಹ್ನ 3.30ರ ಬಳಿಕ ಮತದಾನ ಚುರುಕುಗೊಂಡಿತು. ಸಂಜೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಬಿಜೆಪಿಯಿಂದ ಸ್ಪರ್ಧಿಸಿರುವ ಎ.ಎಚ್. ಬಸವರಾಜು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಅನ್ಸರ್ ಪಾಷಾ ಹಾಗೂ ಜೆಡಿಎಸ್ನಿಂದ ಸ್ಪರ್ಧಿಸಿರುವ ಮಹಮ್ಮದ್ ಅಕ್ಬರ್ ಅವರು ಮತ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.