ಬೆಂಗಳೂರು: ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಸಂಸ್ಥೆಯ ವತಿಯಿಂದ 8ನೇ ವರ್ಷದ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಭಾನುವಾರ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಪಾಲಿಕೆಯ ಸದಸ್ಯ ಪುರುಷೋತ್ತಮ್, `ಸಂಘವು ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ರೀತಿಯ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಈ ಸೇವೆ ಎಲ್ಲರಿಗೂ ದೊರೆಯಬೇಕು' ಎಂದರು.
ಅಧ್ಯಕ್ಷತೆ ವಹಿಸಿದ ಡಾ. ಪುರುಷೋತ್ತಮ್ `ಸಂಘದ ವತಿಯಿಂದ ಉಚಿತ ಆರೋಗ್ಯ ಸೇವೆ, ವಿದ್ಯಾರ್ಥಿವೇತನ, ಉಚಿತ ಊಟ ಹಾಗೂ ವಸತಿಯ ವಿದ್ಯಾರ್ಥಿನಿಲಯ ಮುಂತಾದ ಸೇವೆಗಳನ್ನು ಸಂಘವು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದು, ಹೀಗೆ ಮುಂದುವರೆಯಲಿ' ಎಂದು ಆಶಿಸಿದರು.
ಸಂಘದ ಅಧ್ಯಕ್ಷ ಎಂ. ವೇದಕುಮಾರ್, `ಆರೋಗ್ಯ ಚಿಕಿತ್ಸಾಲಯವನ್ನು ಸ್ಥಾಪಿಸಿ, ಬಡಜನರಿಗೆ ಔಷಧಿಯೊಂದಿಗೆ ಅಂಬುಲೆನ್ಸ್ ಸೇವೆಯನ್ನು ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದೆ' ಎಂದು ತಿಳಿಸಿದರು. ಸಂಘಟನಾ ಕಾರ್ಯದರ್ಶಿ ಬಿ. ಎಂ. ಉದಯಕುಮಾರ್, ಉಪಾಧ್ಯಕ್ಷೆ ಕೆ. ಶಾರದಾಕೃಷ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ ಇತರರು ಉಪಸ್ಥಿತರಿದ್ದರು.
ಎಪ್ಪತ್ತೈದಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.