ಹುಬ್ಬಳ್ಳಿ: ನಗರದ ಬಿ.ವಿ.ಬಿ. ಕಾಲೇಜಿನ ಮೈದಾನದಲ್ಲಿ ಈಗ ವಿದ್ಯಾರ್ಥಿಗಳ ಗಂಭೀರ ಕ್ರಿಕೆಟ್ಗೆ ವೇದಿಕೆ ತೆರೆದುಕೊಂಡಿದೆ. ಕೆ.ಎಲ್.ಇ. ಸೊಸೈಟಿಯ ಶಿಕ್ಷಣ ಸಂಸ್ಥೆಗಳ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಮೊತ್ತಮೊದಲ ಕೆ.ಎಲ್.ಇ. ಕಪ್ ಟಿ-20 ಕ್ರಿಕೆಟ್ ಟೂರ್ನಿ ಸೋಮವಾರ ಆರಂಭಗೊಂಡಿದ್ದು ಮೈದಾನದಲ್ಲಿ ಮಿಂಚಿನ ಸಂಚಾರವಾಗಿದೆ.
ಹುಬ್ಬಳ್ಳಿಯ್ಲ್ಲಲಿ ಅಪರೂಪವೆಂದೇ ಹೇಳಬಹುದಾದ ಹೊನಲು ಬೆಳಕಿನಡಿ ಕೂಡ ಪಂದ್ಯಗಳು ನಡೆಯಲಿವೆ. ಬಿ.ವಿ.ಬಿ. ಮೈದಾನದಲ್ಲಿ ಇದೇ ಮೊದಲ ಬಾರಿ `ಫ್ಲಡ್ಲೈಟ್~ ಟವರ್ಗಳು ಎದ್ದು ನಿಂತಿವೆ. ಒಟ್ಟು ಆರು ದಿನಗಳ ಟೂರ್ನಿಯಲ್ಲಿ ಪ್ರತಿದಿನ ಒಂದು ಪಂದ್ಯ ಹಗಲು-ರಾತ್ರಿ ನಡೆಯಲಿದ್ದು ಹೊಸ ವ್ಯವಸ್ಥೆಯನ್ನು ಪರೀಕ್ಷಿಸುವುದಕ್ಕಾಗಿ ಬಿವಿಬಿ ಸಿಬ್ಬಂದಿಯ ಪಂದ್ಯ ಸೋಮವಾರ ಪ್ರಾಯೋಗಿಕವಾಗಿ ಹೊನಲು ಬೆಳಕಿನಡಿ ನಡೆದಿದೆ.
`ಫ್ಲಡ್ಲೈಟ್~ ವ್ಯವಸ್ಥೆಗಾಗಿ ಮೈದಾನದ ಎಂಟು ಮೂಲೆಗಳಲ್ಲಿ ಬೃಹತ್ ಬೆಳಕಿನ ಟವರ್ಗಳನ್ನು ಅಳವಡಿಸಲಾಗಿದೆ. ಇವುಗಳಿಂದ ತೂರಿಬರುವ ಬೆಳಕಿನ ಪುಂಜ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಹರ್ಷದ ಹೊನಲು ಹರಿಸಿದ್ದು ಬಿವಿಬಿ ಐಟಿ ಹಾಗೂ ನಾನ್ ಐಟಿ ಸಿಬ್ಬಂದಿ ನಡುವೆ ಸೋಮವಾರ ನಡೆದ ಪಂದ್ಯ ವೀಕ್ಷಿಸಲು ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.
ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ಚಿಕ್ಕೋಡಿ, ನಿಪ್ಪಾಣಿ ಮುಂತಾದ ಕಡೆಯ ಹದಿನೆಂಟು ಸಂಸ್ಥೆಗಳ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿವೆ. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಪಂದ್ಯಗಳು ನಡೆಯಲಿವೆ.
ಉದ್ಘಾಟನೆ: ಸೋಮವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಕ್ರಿಕೆಟ್ ಪಟು ರಾಹುಲ್ ಭಟ್ಕಳ ಟೂರ್ನಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆ.ಎಲ್.ಇ. ಸಂಸ್ಥೆ ರಾಜ್ಯ ಹಾಗೂ ಅಂತರರಾಜ್ಯ ಪಂದ್ಯಗಳನ್ನು ನಡೆಸಲು ಸಾಮರ್ಥ್ಯ ಹೊಂದಿದ್ದು ಅಂತರ ಸಂಸ್ಥೆ ಟೂರ್ನಿಯ ಜೊತೆಗೆ ಅಂತರರಾಜ್ಯ ಮಟ್ಟದ ಪಂದ್ಯಗಳನ್ನು ಕೂಡ ನಡೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯದ ಸಂಚಾಲಕ ಬಾಬಾ ಭೂಸದ, ಬಿ.ವಿ.ಬಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಂ. ಕುರಗೋಡಿ, ಟೂರ್ನಿಯ ಸಂಯೋಜಕ ಪ್ರೊ. ವಿವೇಕ ಕೋಮಲಾಪುರ, ಜಿಮ್ಖಾನಾ ಅಧ್ಯಕ್ಷ ಪ್ರೊ, ಅರುಣ ಕಾಖಂಡಕಿ ಮತ್ತಿತರರು ಉಪಸ್ಥಿತರ್ದ್ದಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.