ಬಸವಕಲ್ಯಾಣ: ತಾಲ್ಲೂಕಿನ ಆಲಗೂಡ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಂತೋಷಮ್ಮ ಕೌಡಾಳೆ ಭೇಟಿಕೊಟ್ಟರು. ಈ ಸಂದರ್ಭದಲ್ಲಿ ಬಿಸಿಯೂಟದ ಅಕ್ಕಿ ಮಣ್ಣಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಅವರು ಮಧ್ಯಾಹ್ನ ಶಾಲೆಗೆ ದಿಢಿ ೀರ ಭೇಟಿಕೊಟ್ಟಾಗ ಮುಖ್ಯ ಶಿಕ್ಷಕ ಒಳಗೊಂಡು ಕೆಲ ಶಿಕ್ಷಕರು ಗೈರು ಹಾಜರಿದ್ದರು. ಆದ್ದರಿಂದ ಹಾಜರಿ ಪುಸ್ತಕ ಪರಿಶೀಲಿಸಲು ಹೋದಾಗ ಶಿಕ್ಷಕರೊಬ್ಬರು ಹಾಜರಿ ಪುಸ್ತಕದಲ್ಲಿ ಉಪಸ್ಥಿತರಿಲ್ಲದ ಶಿಕ್ಷಕರ ಹೆಸರಿನ ಮುಂದೆ ಸಿ.ಎಲ್ ಹಾಕಿದರು. ಆದ್ದರಿಂದ ಆಕ್ರೋಶಗೊಂಡ ಸಂತೋಷಮ್ಮ ಅವರು ಶಿಕ್ಷಕನ ಕ್ರಮವನ್ನು ಖಂಡಿಸಿದರು. ಹೀಗೆ ತಪ್ಪು ದಾರಿ ಹಿಡಿದರೆ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು. ಬಿಸಿಯೂಟದ ಅಕ್ಕಿಯನ್ನು ಸರಿಯಾಗಿ ಇಡಬೇಕು. ಊಟದಲ್ಲಿ ತರಕಾರಿ ಬಳಸಬೇಕು.
ಎಲ್ಲ ಮಕ್ಕಳಿಗೂ ಸರಿಯಾಗಿ ಊಟ ಕೊಡಬೇಕು ಎಂದು ತಾಕೀತು ಮಾಡಿದರು. ನಂತರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟು ಅಲ್ಲಿನ ಬೀಳುವ ಸ್ಥಿತಿಯಲ್ಲಿರುವ ಕೊಣೆಯಲ್ಲಿ ಮಕ್ಕಳನ್ನು ಕೂಡಿಸಬಾರದು ಎಂದು ಶಿಕ್ಷಕರಿಗೆ ಸೂಚಿಸಿದರು. ಬೀದರ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಂಜೀವರೆಡ್ಡಿ ಯರಬಾಗ, ಮಹಾದೇವರೆಡ್ಡಿ ಉಪಸ್ಥಿತರಿದ್ದರು.