ಬೆಂಗಳೂರು: ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ `ಬೀಗರ ಔತಣ' ಕಾರ್ಯಕ್ರಮ ನಡೆಸಲು ಹೈಕೋರ್ಟ್ ಶುಕ್ರವಾರ ಅಸ್ತು ಎಂದಿದೆ. ಆದರೆ ಕಾರ್ಯಕ್ರಮವು ಬೆಳಿಗ್ಗೆ 10.30ರಿಂದ ಸಂಜೆ 7.30ರೊಳಗೆ ನಡೆಯಬೇಕು ಎಂದು ತಾಕೀತು ಮಾಡಿದೆ.
`ಇದೇ 21ರಂದು ನನ್ನ ನಿವಾಸದಲ್ಲಿ ಬೀಗರ ಔತಣ ಕಾರ್ಯಕ್ರಮ ಇದೆ. ಆದರೆ ಇದನ್ನು ನಡೆಸಲು ತಹಶೀಲ್ದಾರ್ ಅನುಮತಿ ನೀಡಿಲ್ಲ. ಅನುಮತಿ ನೀಡುವಂತೆ ನಿರ್ದೇಶನ ನೀಡಬೇಕು' ಎಂದು ಕೋರಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡ ಮಗ್ಗೆ ಮೂಲದ ವಕೀಲ ರಂಗನಾಥ ಅವರು ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ನಡೆಸಿದ್ದರು.ಕಾರ್ಯಕ್ರಮದಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳು ಪಾಲ್ಗೊಳ್ಳುವಂತಿಲ್ಲ. ಕಾರ್ಯಕ್ರಮದಲ್ಲಿ ಏನಾದರೂ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ, ಮಧ್ಯಪ್ರವೇಶ ಮಾಡಲು ಚುನಾವಣಾ ಅಧಿಕಾರಿಗೆ ಅಧಿಕಾರ ಇದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಬೀಗರ ಔತಣ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡದ ತಹಶೀಲ್ದಾರ್ ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.