ಲಿಂಗಸುಗೂರ: ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಉತ್ತಮವಾಗಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಆದರೆ, ಇನ್ನೊಂದೆಡೆ ಕಂಪೆನಿಗಳು ಮತ್ತು ವ್ಯಾಪಾರಸ್ಥರು ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿರುವುದಕ್ಕೆ ಬೇಸತ್ತ ರೈತರು ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹದಿನೈದು ದಿನಗಳಿಂದ ರೈತರು ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬಿಲ್ ಕೇಳುವವರಿಗೆ ಸಾಮಗ್ರಿ ದೊರಕುತ್ತಿಲ್ಲ. ವಾಗ್ವಾದ ಮಾಡುವವರಿಗೆ ತಾವು ಕೇಳುವ ಬೀಜ ಮತ್ತು ಗೊಬ್ಬರ ಇಲ್ಲ ಎಂದು ವ್ಯಾಪಾರಸ್ಥರು ಸ್ಪಷ್ಟ ಉತ್ತರ ನೀಡುತ್ತಿದ್ದಾರೆ ಎಂದು ಅಮರಣ್ಣ ಗುಡಿಹಾಳ ಆರೋಪಿಸಿದರು.
ಕಂಪೆನಿಯ ಗರಿಷ್ಠ ಮಾರಾಟ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಬೀಜ, ಗೊಬ್ಬರ ಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ರೈತರು ಹೋರಾಟ ಮಾಡಲು ಬಂದರೆ, ರೈತರಿಗೆ ಪಾಠ ಕಲಿಸಲು ಈ ಕೃತಕ ಅಭಾವದ ನಾಟಕ ಸುರುವಾಗಿದೆ ಎಂದು ರೈತ ಮುಖಂಡ ಹನುಮಪ್ಪ ದೂರಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ) ಮಲ್ಲಿಕಾರ್ಜುನ ಮಾತನಾಡಿ, ಕೃತಕ ಅಭಾವ ಸೃಷ್ಟಿಸುವ ವ್ಯಾಪಾರಸ್ಥರು ಮತ್ತು ಕಂಪೆನಿಗಳ ವಿರುದ್ಧ ಶಿಸ್ತು ಕ್ರಮ ಕೈಕೊಳ್ಳಲು ಮೇಲಧಿಕಾರಿಗಳ ಗಮನ ಸೆಳೆಯಲಾಗುವುದು. ಎಂಆರ್ಪಿ ದರಕ್ಕಿಂತ ದುಪ್ಪಟ್ಟು ಬೆಲೆ ಹೇಳುವ ವ್ಯಾಪಾರಸ್ಥರ ಮಾಹಿತಿ ನೀಡಿದಲ್ಲಿ ತಕ್ಷಣವೇ ಭೇಟಿ ನೀಡಿ ಪರಿಶೀಲಿಸಲಾಗುವುದು. ಯಾವುದಕ್ಕೂ ರೈತರಿಗೆ ತೊಂದರೆ ಆಗದಂತೆ ಮುಂಜಾಗ್ರತೆ ತೆಗೆದುಕೊಳ್ಳುವ ಭರವಸೆ ನೀಡಿದರು.