ಹಿರೀಸಾವೆ: ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಕಾಮಗಾರಿ ಬರದಿಂದ ಸಾಗುತ್ತಿದ್ದು, ಮುಂದಿನ ಮಾರ್ಚ್ ಒಳಗೆ ಈ ಮಾರ್ಗದ ಕಾಮಗಾರಿ ಹಿರೀಸಾವೆಯವರೆಗೆ ಪೂರ್ಣವಾಗುವ ಲಕ್ಷಣಗಳು ಕಾಣುತ್ತಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ಬಜೆಟ್ನಲ್ಲಿ ಪಟ್ಟಣದವರೆಗೆ ಮಾರ್ಗ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿ, ಶ್ರವಣಬೆಳಗೊಳದಿಂದ ಹಿರೀಸಾವೆಯವರೆಗೆ ರೈಲ್ವೆ ಸಂಚಾರ ಪ್ರಾರಂಭ ಮಾಡುವ ಭರವಸೆ ನೀಡಿದ್ದವು.
12 ವರ್ಷಗಳ ಹಿಂದೆ ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ನಿರ್ಮಾಣಕ್ಕೆ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ಹಾಸನ-ಶ್ರವಣಬೆಳಗೂಳದವರೆಗೆ ಮಾರ್ಗವನ್ನು ಪೂರ್ಣಗೊಳಿಸಿ, ಕೆಲವು ದಿನಗಳು ರೈಲು ಒಡಾಟ ಸಹ ನಡೆಸಿ ನಂತರ ನಿಲ್ಲಿಸಲಾಗಿದೆ. ಅಂದಿನಿಂದ ಇಲ್ಲಿವರೆಗೆ ಕುಂಟುತ್ತಾ ಸಾಗಿದ್ದ ಕೆಲಸವು ಕಳೆದ ತಿಂಗಳಿನಿಂದ ಬಿರುಸಿನಿಂದ ಸಾಗಿದೆ.
ಎರಡು ವರ್ಷಗಳ ಹಿಂದೆ ಶ್ರವಣಬೆಳಗೊಳ-ಹಿರೀಸಾವೆ ರಸ್ತೆಗೆ ಮೇಲು ಸೇತುವೆ ರಸ್ತೆಯನ್ನು ನಿರ್ಮಾಣ ಮಾಡಿ, ವಾಹನಗಳು ಸಂಚಾರ ಮಾಡುತ್ತಿವೆ.
ಈ ಹಿಂದೆ ನಿರ್ಮಾಣ ಮಾಡಿದ್ದ ರೈಲ್ವೆ ಏರಿಯ ಕೆಲವು ಭಾಗಗಳಲಿ ಮಣ್ಣು ಕುಸಿದಿದ್ದ ಕಡೆಗಳಿಗೆ ಹೊಸದಾಗಿ ಮಣ್ಣನ್ನು ತುಂಬಲಾಗಿದೆ.
ಜೆಲ್ಲಿ, ಹಳಿಗಳು, ಮತ್ತು ಇತರೆ ಸಾಮಗ್ರಿಗಳನ್ನು ಶೇಖರಣೆ ಮಾಡಿ, ಒಂದು ವಾರದಿಂದ ಕಂಬಿಗಳನ್ನು ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.