ಸಕಲೇಶಪುರ: 3 ಲಕ್ಷ ರೂಪಾಯಿ ಮೌಲ್ಯದ ಬೆತ್ತ ಕಳ್ಳಸಾಗಣೆ ಮಾಡುತ್ತಿದ್ದ ಲಾರಿಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ 8 ಕಿ.ಮೀ ದೂರ ಬೆನ್ನಟ್ಟಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡದ ಗುಂಡ್ಯಾ ಕಡೆಯಿಂದ ಶಿರಾಡಿ ಘಾಟ್ ಮಾರ್ಗವಾಗಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬೆತ್ತವನ್ನು ಕ್ಯಾಂಟರ್ ಲಾರಿಯೊಂದರಲ್ಲಿ ಕಳ್ಳಸಾಗಣೆ ಮಾಡ ಲಾಗುತ್ತಿದೆ ಎಂಬ ಖಚಿತ ಮಾಹಿತಿ ಇಲಾಖೆಯ ಅಧಿಕಾರಿಗಳಿಗೆ ಬಂದಿತ್ತು.
ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಶಿರಾಡಿ ಘಾಟ್ ಕಡೆಯಿಂದ ಆನೇಮಹಲ್ ಬಳಿ ಸದರಿ ಲಾರಿಯನ್ನು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಡೆದಾಗ, ಚಾಲಕ ನಿಲ್ಲಿಸದೇ ವೇಗವಾಗಿ ಓಡಿಸಿದ್ದಾನೆ. ಲಾರಿ ಹಿಂಬಾಲಿಸಿದ ಸಿಬ್ಬಂದಿ ಬಾಗೆ ಸಮೀಪ ಎರಡು ಸುತ್ತು ಗುಂಡು ಹಾರಿಸಿದಾಗ ಲಾರಿ ನಿಲ್ಲಿಸಿ ಐವರು ಆರೋಪಿಗಳು ಪಕ್ಕದ ಕಾಫಿ ತೋಟದ ಒಳಗೆ ಓಡಿ ತಲೆಮರೆಸಿಕೊಂಡಿದ್ದಾರೆ.
ಲಾರಿ ಚಾಲಕ ಅನೂಪ್ನನ್ನು ಬಂಧಿಸಲಾಗಿದೆ. ಪುತ್ತೂರು ತಾಲ್ಲೂಕಿನ ಪೆರಮಜಾಲ ಗ್ರಾಮದ ಗಣೇಶ, ವಸಂತ, ರಾಜು, ತನಿಯಪ್ಪ, ಪ್ರಕಾಶ್ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದು. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ವಲಯ ಅರಣ್ಯ ಅಧಿಕಾರಿ ಎಸ್.ಪಿ.ಮಹದೇವ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಬಿ.ಎಸ್.ಮುಬಾರಕ್, ಕಾಂತರಾಜ್, ಅರಣ್ಯ ರಕ್ಷಕರುಗಳಾದ ನಾಗೇಶ್, ವೇಣುಗೋಪಾಲ್, ರಾಘವೇಂದ್ರ ಹಾಗೂ ಅರಣ್ಯ ವೀಕ್ಷಕರಾದ ಲೋಕೇಶ್ ದಾಳಿಯ ನೇತೃತ್ವ ವಹಿಸಿದ್ದರು.