ಬೆಳ್ತಂಗಡಿ: ಪೊಲೀಸ್ ತಂಡ ತಮ್ಮ ಸದೋದ್ಯೋಗಿಯನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಮುಳುಗಿದ್ದರೆ ಸ್ಥಳದಲ್ಲಿದ್ದ ಸವಣಾಲು ಗ್ರಾ.ಪಂ. ಅಧ್ಯಕ್ಷೆಗೆ ನಕ್ಸಲ್ ಪ್ಯಾಕೇಜ್ ಚಿಂತೆಯಾದರೆ, ಗ್ರಾ.ಪಂ. ಸದಸ್ಯನಿಗೆ ಜಾಗದ ಬೆಲೆ ಕಡಿಮೆಯಾಗುತ್ತದೆ ಎಂಬ ಆತಂಕ!
`ನಮ್ಮ ಗ್ರಾಮದಲ್ಲಿ ನಕ್ಸಲರು ಇರುವ ಬಗ್ಗೆ ಇಲ್ಲಿಯವರೆಗೂ ಪೊಲೀಸರು ಬಾಯಿ ಬಿಟ್ಟಿರಲಿಲ್ಲ. ಈಗ ಮೊದಲ ಬಾರಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ತೀರ್ಮಾನಿಸಲಾಗಿದೆ. ರಸ್ತೆ, ವಿದ್ಯುತ್ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕು~ ಎಂದು ಸವಣಾಲು ಗ್ರಾ.ಪಂ. ಅಧ್ಯಕ್ಷೆ ವಿಮಲಾ ವಿನಂತಿಸಿದರು.
`ಈ ಘಟನೆ ನಮ್ಮ ಗ್ರಾಮಕ್ಕೆ ಕಪ್ಪುಚುಕ್ಕೆ. ಇನ್ನು ಊರಿನಲ್ಲಿ ಜಾಗ ಕೊಳ್ಳಲು ಯಾರೂ ಬರುವುದಿಲ್ಲ. ಭೂಮಿಯ ಬೆಲೆ ಕುಸಿಯಲಿದೆ~ ಎಂದು ಗ್ರಾ.ಪಂ. ಸದಸ್ಯರೊಬ್ಬರು ಆತಂಕ ವ್ಯಕ್ತಪಡಿಸಿದರು.