ಗುವಾಹಟಿ (ಪಿಟಿಐ): ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಬುಧವಾರ ಮಧ್ಯರಾತ್ರಿ ಆಡಳಿತಾರೂಢ ಕಾಂಗ್ರೆಸ್ ಮೈತ್ರಿಕೂಟದ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಶಾಸಕನನ್ನು ಬಂಧಿಸಿದ್ದಾರೆ.
ಕೋಕ್ರಝಾರ್ (ಪಶ್ಚಿಮ) ಕ್ಷೇತ್ರದ ಶಾಸಕ ಪ್ರದೀಪ್ ಬ್ರಹ್ಮ ಅಲಿಯಾಸ್ ಗಾರಾ ಅವರನ್ನು ಕೋಕ್ರಝಾರ್ ಸಮೀಪದ ಡೊಟೊಮಾ ನಿವಾಸದಲ್ಲಿ ಪೊಲೀಸರು ಬಂಧಿಸಿದರು. ಶಾಸಕರ ವಿರುದ್ಧ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. ಬಂಧನ ವಿಷಯ ತಿಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿ ಬಂದ್ ಮತ್ತು ರೈಲ್ವೆ ತಡೆ ನಡೆಸಿದರು.
ಕರ್ಫ್ಯೂ: ಶಾಸಕರ ಬಂಧನ ಮತ್ತು ನೆರೆಯ ಧುಬ್ರಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಮರುಕಳಿಸಿದ ಹಿಂಸಾಚಾರದಲ್ಲಿ ವ್ಯಕ್ತಿಗಳಿಬ್ಬರು ಕೊಲೆಯಾದ ಹಿನ್ನೆಲೆಯಲ್ಲಿ ಕೋಕ್ರಝಾರ್ ಜಿಲ್ಲೆಯಲ್ಲಿ ಅನಿರ್ಧಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ. ಈ ಪ್ರದೇಶದಲ್ಲಿ ಸೇನಾಪಡೆಗಳು ಪಥ ಸಂಚಲನ ನಡೆಸಿದವು.
ರಾಜ್ಯದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಹೊಸ ಸಂಘಟನೆಯಾದ ಮುಸ್ಲಿಂ ಯುವ ಪರಿಷತ್ ಕರೆ ನೀಡಿದ್ದ ಬಂದ್ನಿಂದಾಗಿ ಕೆಳ ಅಸ್ಸಾಂನ ಬಹುತೇಕ ಜಿಲ್ಲೆಯಲ್ಲಿ ಅಂಗಡಿ, ಮುಂಗಟ್ಟು, ಶಾಲೆ, ಕಾಲೇಜುಗಳು ಮುಚ್ಚಿದ್ದವು. ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತು. ರೈಲು ಸ್ಥಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ.
ಸಿಎಂ ಮನವಿ: ಈ ನಡುವೆ ವಿವಿಧ ಸಾಮಾಜಿಕ ಸಂಘಟನೆಗಳನ್ನು ಭೇಟಿಯಾದ ಮುಖ್ಯಮಂತ್ರಿ ತರುಣ್ ಗೊಗೊಯ್, ಕಾಳ್ಗಿಚ್ಚಿನಂತೆ ಹರಡುತ್ತಿರುವ ಗಾಳಿಸುದ್ದಿ, ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪರಿಹಾರ ಶಿಬಿರಗಳು ನಿರಾಶ್ರಿತರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ನೈರ್ಮಲ್ಯ ಕಾಪಾಡುವ ಅಗತ್ಯವಿದೆ ಎಂದು ಅವರು ಒಪ್ಪಿಕೊಂಡರು.