ನವದೆಹಲಿ (ಪಿಟಿಐ): ಬ್ಯಾಂಕಿಂಗ್, ವಿಮೆ, ದೂರವಾಣಿ, ವಿದ್ಯುತ್ ಸೇರಿದಂತೆ ಆಯ್ದ ವಲಯಗಳ ಮಾರುಕಟ್ಟೆ ಸ್ಪರ್ಧೆಯತ್ತಲೂ ಇನ್ನು `ಭಾರತೀಯ ಸ್ಪರ್ಧಾತ್ಮಕ ಆಯೋಗ~ (ಸಿಸಿಐ) ನಿಗಾ ವಹಿಸಲಿದೆ.
`ಸ್ಪರ್ಧಾತ್ಮಕತೆ ಕುರಿತು ನಿಗಾ ವಹಿಸುವ ಹಲವು ಸಂಸ್ಥೆಗಳು ದೇಶದಲ್ಲಿದ್ದರೂ, ಅವುಗಳಲ್ಲಿ ಹೆಚ್ಚಿನವು ಸೀಮಿತ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆ ಸ್ಪರ್ಧಾತ್ಮಕತೆ ಮೇಲೆ ನಿಗಾ ಇಡುವುದು ಈ ಸಂಸ್ಥೆಗಳ ಕಾರ್ಯಸೂಚಿಯಲ್ಲಿ ಇಲ್ಲ~ ಎಂದು `ಸಿಸಿಐ~ ಅಧ್ಯಕ್ಷ ಅಶೋಕ್ ಚಾವ್ಲಾ ಬುಧವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ಮಾರುಕಟ್ಟೆ ಸ್ಪರ್ಧಾತ್ಮಕತೆ ಕುರಿತು ನಿಗಾ ವಹಿಸುವ ಸಂಸ್ಥೆಗಳು ಕಾನೂನಿನ ಜತೆ ಸಂಘರ್ಷಕ್ಕೆ ಇಳಿಯದೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಕಂಪೆನಿಗಳು ಅನುಸರಿಸುತ್ತಿರುವ ಅನಾರೋಗ್ಯಕರ ಸ್ಪರ್ಧೆಯ ಮೇಲೆ ನಿಗಾ ವಹಿಸಬೇಕು ಎಂದು ಚಾವ್ಲಾ ಅಭಿಪ್ರಾಯಪಟ್ಟರು.
ಸರ್ಕಾರ ಕೂಡ ಸ್ಪರ್ಧಾತ್ಮಕತೆ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಚಿಂತನೆ ನಡೆಸುತ್ತಿದೆ. ಆದರೆ, ಹಣಕಾಸು, ಬ್ಯಾಂಕಿಂಗ್ ಸೇರಿದಂತೆ ಹಲವು ಖಾತೆಗಳ ಸಚಿವರು ತಮ್ಮ ಇಲಾಖೆಗಳಿಗೆ ಈ ಕಾನೂನಿನಿಂದ ವಿನಾಯಿತಿ ನೀಡಬೇಕು ಎಂಬ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದರು.