ಕನಕಪುರ: ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಂಘಗಳು ಅತ್ಯಂತ ಜವಬ್ದಾರಿಯುತ ಕರ್ತವ್ಯ ನಿರ್ವಹಿಸುತ್ತಿದ್ದು, ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲದ ವಹಿವಾಟು ನಡೆಸುತ್ತಿದ್ದಾರೆಂದು ಕೃಷಿ ಪ್ರಶಸ್ತಿ ವಿಜೇತ ಕನಕಾಂಬರಿ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷ ಎಚ್.ಕೆ. ಶ್ರಿಕಂಠು ಹೇಳಿದರು.
ಪಟ್ಟಣದ ಶ್ರಿ ಕಲ್ಯಾಣ ಮಂಟಪದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕನಕಾಂಬರಿ ಮಹಿಳಾ ಒಕ್ಕೂಟವು ಕಡಿಮೆ ಅವಧಿಯಲ್ಲಿ ಅತ್ಯತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆನರಾ ಬ್ಯಾಂಕ್ನ ಉಪ ಮಹಾ ಪ್ರಬಂಧಕ ರವೀಂದ್ರ ಭಂಡಾರಿ ಮಹಿಳಾ ಸಂಘಗಳು ಬ್ಯಾಂಕಿನಲ್ಲಿ ಪಡೆದಂತಹ ಸಾಲವನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ನ ವಿಶ್ವಾಸಗಳಿಸುತ್ತಿದ್ದಾರೆಂದು ಹೇಳಿದರು.
ಭಾರತ ದೇಶದಲ್ಲಿನ ಮಹಿಳೆಯರು ಇಂದು ಜಾಗೃತರಾಗುತ್ತಿದ್ದು ಎಲ್ಲಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವುದರ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಯಶಸ್ವಿಯನ್ನು ಕಾಣುತ್ತಿದ್ದಾರೆ ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ರಾಜಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿ ಒಕ್ಕೂಟವು ಕೇವಲ 6 ತಿಂಗಳಲ್ಲಿ 2 ಕೋಟಿ ವಹಿವಾಟು ನಡೆಸಿದೆ. ಸಂಘದ ಒಬ್ಬ ಸದಸ್ಯರಿಗೆ 80 ಸಾವಿರದವರೆಗೂ ಸಾಲವನ್ನು ನೀಡುತ್ತಿದೆ, ಒಕ್ಕೂಟದಲ್ಲಿ ಮಕ್ಕಳ ಉಳಿತಾಯ ಯೋಜನೆ, ಗುಂಪು, ಪರಸ್ಪರ ಸಹಾಯ ನಿಧಿ ಮುಂತಾದ ಹೊಸ ಯೋಜನೆಗಳನ್ನು ಜಾರಿಗೊಳಿಸಿರುವುದಾಗಿ ಹೇಳಿದರು.
ಕೆನರಾ ಬ್ಯಾಂಕ್ನ ಪದ್ಮಿನಿ 19 ಸಂಘಗಳಿಗೆ 40 ಲಕ್ಷ ಸಾಲ ಮಂಜೂರು ಮಾಡಿ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ 10 ಉತ್ತಮ ಸಂಘಗಳಿಗೆ ಬಹುಮಾನ ವಿತರಿಸಿದರು.