ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬರೆಯುವ ಮೂಲಕ ಕನ್ನಡದ ಸಾಧ್ಯತೆಗಳನ್ನು ವಿಸ್ತರಿಸಿದವರು ಡಿ.ವಿ.ಗುಂಡಪ್ಪ.
ಬರವಣಿಗೆಯಷ್ಟೇ ಅಲ್ಲ, ಅವರ ಬದುಕಿದ ರೀತಿ ಕೂಡ ಆದರ್ಶಪ್ರಾಯವಾದುದು.ಅವರ ಬದುಕು-ಬರಹ ಮಾನವೀಯ ಮೌಲ್ಯಗಳ ಅಭಿವ್ಯಕ್ತಿಗಾಗಿ ರೂಪುಗೊಂಡಂತಿತ್ತು.ಇಂಥ ಅದ್ಭುತ ವ್ಯಕ್ತಿತ್ವದ ಗುಂಡಪ್ಪನವರು ಅಪರೂಪದ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರು.
ಈ ಸಹೃದಯರ ಬದುಕಿನ ಕೆಲವು ರಸನಿಮಿಷಗಳನ್ನು ದಾಖಲಿಸುವ ಕೃತಿ `ಬ್ರಹ್ಮಪುರಿಯ ಭಿಕ್ಷುಕ~. ಈ ಬರಹಗಳನ್ನು ಲೇಖಕ ಶತಾವಧಾನಿ ಗಣೇಶ್ ಅವರು `ಡಿವಿಜಿಯವರ ಜೀವನದ ನೂರಾರು ರಸಪ್ರಸಂಗಗಳು~ ಎಂದು ಕರೆದಿದ್ದಾರೆ.
ಇಲ್ಲಿನ ಪ್ರಸಂಗಗಳು ಒಂದು ಅಥವಾ ಎರಡು ಪುಟಗಳಲ್ಲಿ ಮುಗಿಯುತ್ತವೆ. ಇದರಿಂದಾಗಿ ಪುಸ್ತಕವನ್ನು ಎಲ್ಲಿಂದ ಬೇಕಾದರೂ ಓದಬಹುದು. ಲಹರಿ ಬಂದಾಗಲೊಮ್ಮೆ `ಮಂಕುತಿಮ್ಮನ ಕಗ್ಗ~ದ ಪುಟ ತಿರುವಿ ಅಲ್ಲಿನ ಯಾವುದಾದರೂ ರಚನೆಯನ್ನು ಗುನುಗಿದಂತೆ ಇಲ್ಲಿನ ಪ್ರಸಂಗಗಳನ್ನೂ ಓದಲಿಕ್ಕೆ ಸಾಧ್ಯವಿದೆ.
`ಬ್ರಹ್ಮಪುರಿಯ ಭಿಕ್ಷುಕ~ ಕೃತಿಯ ಪ್ರತಿ ಪ್ರಸಂಗವೂ ಗುಂಡಪ್ಪನವರ ರಸಪ್ರಜ್ಞೆ, ವಿದ್ವತ್ತು, ಆದರ್ಶ ಹಾಗೂ ಜೀವನ ಸೌಂದರ್ಯದ ಉದಾಹರಣೆಗಳಂತಿವೆ. ಕಳೆದುಹೋದ ಕಾಲವೊಂದರ ಮೆಲುಕಿನಂತೆಯೂ ಈ ಪ್ರಸಂಗಗಳು ಗಮನಸೆಳೆಯುತ್ತವೆ. ಒಳ್ಳೆಯ ಕಾಗದದಲ್ಲಿ ಮುದ್ರಣಗೊಂಡಿರುವ ಈ ಪುಸ್ತಕದ ಮುಖಪುಟ ವಿನ್ಯಾಸ ಮಾತ್ರ ಮಾಸಿಹೋದ ನೆಗೆಟಿವ್ನಂತೆ ಕಾಣಿಸುತ್ತದೆ.
ಬ್ರಹ್ಮಪುರಿಯ ಭಿಕ್ಷುಕ
ಲೇ: ಶತಾವಧಾನಿ ಆರ್.ಗಣೇಶ್; ಪು: 168; ಬೆ: ರೂ. 120; ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580 020.