ವಿಜಾಪುರ: ‘ವೀರ ಭಗತ್ಸಿಂಗ್ ಅಪ್ರತಿಮ ಕ್ರಾಂತಿಕಾರಿ. ಭಾರತದ ಶ್ರೇಷ್ಠ ಸ್ವಾತಂತ್ರ್ಯಪ್ರೀಯರಲ್ಲಿ ಪ್ರಥಮ ವ್ಯಕ್ತಿ. ಭಾರತೀಯರಿಗೆ ಸ್ವಾತಂತ್ರ್ಯ ಚಳವಳಿಯ ಪ್ರೇರಣೆ ನೀಡಿದ್ದು ಅವರೇ’ ಎಂದು ರಾಜ್ಯ ಮಾನವ ಹಕ್ಕುಗಳ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ರಾಜ್ಯ ಮಾನವ ಹಕ್ಕುಗಳ ಮಂಡಳಿಯಿಂದ ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರ ಭಗತ್ಸಿಂಗ್ರ 80ನೇ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮಾತನಾಡಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಭಗತ್ಸಿಂಗ್, ಸುಖದೇವ ಹಾಗೂ ರಾಜಗುರು ಅವರ ಸ್ವಾತಂತ್ರ್ಯ ಪ್ರೇಮ ಅಮೂಲ್ಯವಾದುದು. ಅವರ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಮಗಿಮಠ ಮಾತನಾಡಿ, ಬ್ರಿಟಿಷರ ಸಾಮ್ರಾಜ್ಯವಾದ ಮತ್ತು ಗುಲಾಮಗಿರಿಯನ್ನು ಕಟುವಾಗಿ ಟೀಕಿಸಿ ಅದರಿಂದ ಮುಕ್ತಿ ಹೊಂದಲು ಭಗತ್ಸಿಂಗ್ ಅವರ ಚಿಂತನೆ ಭಾರತೀಯರ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಟ್ಟಿತು. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಭಗತ್ಸಿಂಗ್, ಸುಖದೇವ ಹಾಗೂ ರಾಜಗುರು ಅವರು ದೇಶ ಸೇವಕರಾಗಿ ದುಡಿದು ಹುತಾತ್ಮರಾದರು ಎಂದು ಅವರು ಸ್ಮರಿಸಿದರು. ಲಕ್ಷ್ಮಣ ಬೆಟಗೇರಿ, ಶಿವಾನಂದ ಕುದರಗೊಂಡ, ಶಾಂತಯ್ಯಸ್ವಾಮಿ ಹಿರೇಮಠ, ಹನುಮಂತ ಪೂಜಾರಿ, ಶಂಕರ ಹಾಲಳ್ಳಿ, ಮೊಹ್ಮದ ವಾಲಿಕಾರ, ಸುನೀಲ್ ಪಾಟೀಲ ಇತರರು ಪಾಲ್ಗೊಂಡಿದ್ದರು.
ದಯೆ ಸಂಸ್ಥೆ: ವಿಜಾಪುರದ ದಯೆ ಸ್ವಯಂ ಸೇವಾ ಸಂಸ್ಥೆಯ ಕಚೇರಿಯಲ್ಲಿ ಭಗತ್ಸಿಂಗ್, ಸುಖದೇವ ಹಾಗೂ ರಾಜಗುರು ಅವರ 80ನೇ ಹುತಾತ್ಮ ದಿನ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ಪಡೇಕನೂರ ಮಾತನಾಡಿದರು. ಪವಿತ್ರ ಕೃಷ್ಣಮೂರ್ತಿ, ಶಮ್ಸ್ ತಬರೇಜ್ ಯಂಕಂಚಿ, ಸುಜಾತಾ ಅಂಗಡಿ, ಅಂಜುಮ್ ಅಗಸಬಾಳ, ನಾಸೀರ, ಝಾಕೀರ ಇತರರು ಪಾಲ್ಗೊಂಡಿದ್ದರು.