ಮುಳಬಾಗಲು: ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಸುರಿದ ಮಳೆ, ಕೃಷಿ ಚಟುವಟಿಕೆಗಳಿಗೆ ಜೀವಕಳೆ ತುಂಬಿದೆ.
ಕೆರೆಗಳಿಗೆ ನೀರು ಬಂದಿದ್ದು, ರೈತರು ಭತ್ತ ಬಿತ್ತನೆಗೆ ಅಣಿ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಭತ್ತಕ್ಕಾಗಿ ಕೃಷಿ ಇಲಾಖೆ ಕಚೇರಿ ಮುಂದೆ ಜಮಾಯಿಸಿದ್ದ ದೃಶ್ಯ ಬುಧವಾರ ಕಂಡು ಬಂತು. ಅಲ್ಪ ಅವಧಿಯ ಬಿಳಿ ಹಂಸ ಮತ್ತು ಒಂದು ಸಾವಿರ ಭತ್ತದ ಬೀಜಕ್ಕೆ ಬೇಡಿಕೆ ಹೆಚ್ಚಿದೆ.
ಕೃಷಿ ಇಲಾಖೆ 1453 ಕ್ವಿಂಟಲ್ ನೆಲಗಡಲೆ, 710 ಕ್ವಿಂಟಲ್ ಭತ್ತ, 36 ಕ್ವಿಂಟಲ್ ತೊಗರಿ ಬಿತ್ತನೆ ಬೀಜವನ್ನು ರೈತರಿಗೆ ಪೂರೈಸಿದೆ. ಇದರ ಜತೆ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳಿಗಳು `ಪ್ರಜಾವಾಣಿ~ಗೆ ತಿಳಿಸಿದರು.
ಬಿತ್ತನೆ ಬೀಜ ಪಡೆಯಲು ಕಂಪ್ಯೂಟರ್ ಕೇಂದ್ರದಲ್ಲಿ ಪಹಣಿಗೆ, ಗ್ರಾಮಲೆಕ್ಕಿಗರಿಂದ ನೀರಾವರಿ ಸೌಲಭ್ಯವಿರುವ ಬಗ್ಗೆ ಹಾಗೂ ಇತರೆ ದೃಢೀಕರಣ ಪಡೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಮಧ್ಯಾಹ್ನ ಮೂರು ಗಂಟೆವರೆವಿಗೂ ಬಿತ್ತನೆ ಬೀಜ ಬಂದಿರಲಿಲ್ಲ. ಆದರೆ ರೈತರು ವ್ಯವಸಾಯ ಇಲಾಖೆಯ ಅನುಮತಿ ಪಡೆದು ನಂತರ ಬೀಜ ನೀಡುವ ಉಗ್ರಾಣದ ಬಳಿ ಭತ್ತದ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದರು. ಸಂಜೆ ನಾಲ್ಕು ಗಂಟೆ ವೇಳೆಗೆ ಈ ಸಂಖ್ಯೆ ಸಾವಿರ ದಾಟಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.