ಯಾದಗಿರಿ: ಶಹಾಪುರ ತಾಲ್ಲೂಕಿನ ಗಡ್ಡೆಸುಗೂರ ಗ್ರಾಮದ ಬಳಿಯ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಭರದಿಂದ ಸಾಗಿದೆ. ಗಡ್ಡೆಸುಗೂರ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಬ್ಯಾರೇಜ್ನ ಕನಸು ನನಸಾಗುವ ಕಾಲ ಸಮೀಪಿಸುತ್ತಿದೆ.
ಎರಡು ತಿಂಗಳ ಹಿಂದೆ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣದ ಭೂಮಿ ಪೂಜೆ ಮಾಡಲಾಗಿತ್ತು. ದೊಡ್ಡದಾದ 50 ಮೀಟರ್ ಉದ್ದದ ಹಳ್ಳಕ್ಕೆ ಸುಮಾರು ರೂ. 75 ಲಕ್ಷ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಣಮಂತರೆಡ್ಡಿ, ಸಹಾಯಕ ಎಂಜಿನಿಯರ್ ತೇಜಪ್ಪಗೌಡ, ಕಾಮಾಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು.
ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣದಿಂದ ಸುತ್ತಲಿನ ಅನೇಕ ರೈತರಿಗೆ ನೀರಾವರಿಸೌಲಭ್ಯ ಸಿಗಲಿದೆ. ಬೇಸಿಗೆ ಕಾಲದಲ್ಲಿ ನೀರು ಸಂಗ್ರಹದಿಂದ ರೈತರಿಗೆ ಮತ್ತು ಜಾನುವಾರುಗಳಿಗೆ ನೀರಿನ ಸೌಕರ್ಯ ಕಲ್ಪಿಸದಂತಾಗಿದೆ ಎಂದು ತಿಳಿಸಿದರು.
ಹಳ್ಳದ ನೀರು ಪೋಲಾಗಿ ಹರಿಯುವುದನ್ನು ತಪ್ಪಿಸಿ, ಸಣ್ಣ ನೀರಾವರಿ ಇಲಾಖೆ ಯೋಜನೆಯಡಿ ರೈತರಿಗೆ ಅನುಕೂಲ ಮಾಡಿದಂತಾಗಿದೆ. ಮಳೆಗಾಲದಲ್ಲಿ ಹಳ್ಳಕ್ಕೆ ಸುತ್ತಲಿನ ಬೆಟ್ಟಗಳಿಂದ ಮಳೆಯ ನೀರು ಧಾರಾಳವಾಗಿ ಹರಿಯುತ್ತಿದ್ದು, ಹಳ್ಳ ದಾಟಲು ರೈತರು ಪರದಾಡುವಂತಾಗಿತ್ತು. ಬ್ಯಾರೇಜ್ ನಿರ್ಮಾಣದಿಂದ ರಸ್ತೆ ಸಂಪರ್ಕ ಮತ್ತು ನೀರಿನ ಸೌಲಭ್ಯ ಒದಗಿಸಿದಂತಾಗುತ್ತದೆ. ಎರಡು ತಿಂಗಳಲ್ಲಿ ಬ್ಯಾರೇಜ್ ನಿರ್ಮಾಣ ಪೂರ್ಣವಾಗಲಿದೆ ಎಂದರು.