ರಾಜರಾಜೇಶ್ವರಿನಗರ: ಕೃಷಿ ಬಂಡವಾಳ ಹೂಡಿಕೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಲಕ್ಷಾಂತರ ಎಕರೆ ಜಮೀನನ್ನು ಕಸಿದುಕೊಂಡು ರೈತರ ಕೃಷಿ ಬದುಕನ್ನೇ ನಾಶ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ (ಬಿಡಿಸಿಸಿ) ಬ್ಯಾಂಕ್ ನಿರ್ದೇಶಕ ಡಿ.ಹನುಮಂತಯ್ಯ ತೀವ್ರ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಚಂದ್ರಪ್ಪ ಸರ್ಕಲ್ನಲ್ಲಿ ಬಿಡಿಸಿಸಿ ಬ್ಯಾಂಕ್ ಮತ್ತು ಚೋಳನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ವತಿಯಿಂದ ವಿವಿಧ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಸಾಲದ ಚೆಕ್ಗಳನ್ನು ವಿತರಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಇದೇ ರೀತಿಯಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಾ ಹೋದರೆ ಭವಿಷ್ಯದ ದಿನಗಳಲ್ಲಿ ಆಹಾರಕ್ಕಾಗಿ ಯುದ್ಧ ನಡೆಯುವುದು ಖಚಿತ ಎಂದು ಅವರು ಅಭಿಪ್ರಾಯಪಟ್ಟರು.
ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ಬಸಪ್ಪ, ಎಂಪಿಸಿಎಸ್ ಕಾರ್ಯದರ್ಶಿ ಸೋಮಶೇಖರ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷೆ ವೆಂಕಟಮ್ಮ ರೇವಣ್ಣ ಸಿದ್ದಯ್ಯ, ಸದಸ್ಯ ಮುನಿರಾಜು, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರೇವಣ್ಣ ಸಿದ್ದಯ್ಯ ಹಾಜರಿದ್ದರು.