‘ಭಾರತಕ್ಕೆ 250 ಕೋಟಿ ಡಾಲರ್ ನೆರವು ನೀಡಿ’
ನ್ಯೂಯಾರ್ಕ್, ಫೆ. 26 - ಭಾರತದ ತೃತೀಯ ಪಂಚವಾರ್ಷಿಕ ಯೋಜನೆಗೆ ಕನಿಷ್ಠ ಪಕ್ಷ 250 ಕೋಟಿ ಡಾಲರ್ಗಳ ನೆರವನ್ನು ನೀಡುವುದಾಗಿ ಅಮೆರಿಕವು ಒಪ್ಪಿಕೊಳ್ಳಬೇಕೆಂದು ಸಲಹಾ ಕಾರ್ಯ ಮಂಡಳಿಯೊಂದು ಅಧ್ಯಕ್ಷ ಕೆನಡಿಯವರನ್ನು ಒತ್ತಾಯಪಡಿಸಿದೆ.
ಈ ಹಣವು ಇತರ ಮೂಲಗಳಿಂದ ದೊರೆಯಲಾಗುವುದೆಂದು ನಿರೀಕ್ಷಿಸಲಾಗಿರುವ ನೆರವೂ ಸೇರಿ ಯೋಜನೆಯ ಅವಧಿಯಲ್ಲಿ ಭಾರತಕ್ಕೆ ಪ್ರತಿ ವರ್ಷವೂ ನೂರು ಕೋಟಿ ಡಾಲರುಗಳು ದೊರೆಯುವುದೆಂದು ಈ ತಂಡವು ಅಂದಾಜು ಮಾಡಿದೆ.
ಕೆಲವು ಸರಕುಗಳ ಮೇಲೆ ಹೊಸ ತೆರಿಗೆ?
ನವದೆಹಲಿ, ಫೆ. 26 - ಮೂರನೆ ಪಂಚವಾರ್ಷಿಕ ಯೋಜನೆಯ ಪ್ರಥಮ ವರ್ಷವಾದ 1961-62ರ ಬಜೆಟ್ ಅನ್ನು ಕೇಂದ್ರ ಅರ್ಥ ಸಚಿವ ಶ್ರೀ ಮೊರಾರ್ಜಿ ದೇಸಾಯಿ ಅವರು ಬರುವ ಮಂಗಳವಾರ ಸಂಜೆ 5 ಗಂಟೆಗೆ ಲೋಕ ಸಭೆಯ ಮುಂದೆ ಮಂಡಿಸಲಿದ್ದಾರೆ.
ತೃತೀಯ ಯೋಜನೆಯ ಕರಡು ರೂಪು ರೇಷೆಯ ಪ್ರಕಾರ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವೊಂದೇ 1000 ಕೋಟಿ ರೂಪಾಯಿಗಳಷ್ಟು ಹಣವನ್ನು ಹೆಚ್ಚಿನ ತೆರಿಗೆಗಳ ರೂಪದಲ್ಲಿ ಸಂಗ್ರಹಿಸಬೇಕಾಗಿದೆ.
ನಾಡ ದೋಣಿ ಮುಳುಗಿ 25 ಮಂದಿ ಜಲಸಮಾಧಿ
ಕಲ್ಕತ್ತ, ಫೆ. 26 - ಅಸನ್ಸಾಲ್ ಬಳಿ ದಾಮೋದರ ಕಣಿವೆ ಯೋಜನೆಯ ಪಂಚತ್ ಸರೋವರದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ನಾಡ ದೋಣಿಯೊಂದು ಮುಳುಗಿ 25 ಮಂದಿ ಜಲಸಮಾಧಿಯಾದರೆಂದು ಶಂಕಿಸಲಾಗಿದೆ ಎಂಬುದಾಗಿ ಇಂದು ಬೆಳಿಗ್ಗೆ ಇಲ್ಲಿಗೆ ತಲುಪಿರುವ ವರದಿಯ ಪ್ರಕಾರ ತಿಳಿದು ಬಂದಿದೆ.