ರಾಜೀನಾಮೆಗೆ ಪಾಟೀಲ್ರ ಒತ್ತಾಯವಿಲ್ಲ
ನವದೆಹಲಿ, ಆ. 3 - ತಮ್ಮ ಸಚಿವ ಸ್ಥಾನಕ್ಕೆ ನಿನ್ನೆ ನೀಡಿದ ರಾಜೀನಾಮೆ ಬಗ್ಗೆ ಪ್ರಧಾನಮಂತ್ರಿ ನೆಹರೂ ಅವರನ್ನು ಒತ್ತಾಯ ಪಡಿಸಕೂಡದೆಂದು ಸಚಿವ ಶ್ರೀ ಎಸ್. ಕೆ. ಪಾಟೀಲರು ನಿರ್ಧರಿಸಿದ್ದಾರೆಂದು ಇಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಪ್ರಧಾನಮಂತ್ರಿ ನೆಹರೂರವರು ಪತ್ರ ಸ್ವೀಕರಿಸಿದ ನಂತರ ಸಚಿವ ಪಾಟೀಲರು ಈ ನಿರ್ಧಾರ ಕೈಗೊಂಡರೆಂದೂ ವರದಿಯಾಗಿದೆ.
ಹೈದರಾಬಾದಿನಲ್ಲಿ ನಾಳೆ ಪ್ರಾರಂಭವಾಗಲಿರುವ `ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ'ಯಲ್ಲಿ ಶ್ರೀ ಎಸ್. ಕೆ. ಪಾಟೀಲರು ಭಾಗವಹಿಸುವರು.
ನಿನ್ನೆ ಸಚಿವ ಪಾಟೀಲರು ಈ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.
ರಾಜ್ಯಗಳ ನಡುವೆ ಪರಸ್ಪರ `ಕೊಟ್ಟು - ಪಡೆಯುವ' ದೃಷ್ಟಿ ಅಗತ್ಯ ಎಂದು ನಿಜಲಿಂಗಪ್ಪ
ಹೈದರಾಬಾದ್, ಆ. 3 - `ಕೃಷ್ಣಾ - ಗೋದಾವರಿ ನೀರಿನ ಬಳಕೆ ಬಗ್ಗೆ ಜನಿಸಿರುವ ಅಂತರ ರಾಜ್ಯ ವಿವಾದವನ್ನು `ಪರಸ್ಪರ ಕೊಟ್ಟು - ಪಡೆಯುವ' ನೀತಿ ಅನುಸರಿಸುವ ಮೂಲಕ ಎಲ್ಲ ಪಕ್ಷಗಳಿಗೂ ತೃಪ್ತಿಯಾಗುವಂತೆ ಪರಿಹರಿಸಬಹುದು' ಎಂದು ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ನಿನ್ನೆ ಇಲ್ಲಿ ತಿಳಿಸಿದರು.
ಇಲ್ಲಿನ ಕರ್ನಾಟಕ ಶಿಕ್ಷಣ ಸಮಿತಿಯ `ನೃಪತುಂಗ ವಿವಿಧೋದ್ದೇಶ ಪ್ರೌಢಶಾಲೆ'ಯವರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ ಶ್ರೀ ನಿಜಲಿಂಗಪ್ಪನವರು `ವಿರೋಧ ಪಕ್ಷದ ನಿಲುವನ್ನು ಗೌರವಿಸುವುದು ಅತ್ಯಗತ್ಯ' ಎಂದರು.