ಜೋಹರ್ ಬಹ್ರು, ಮಲೇಷ್ಯಾ (ಪಿಟಿಐ): ಭಾರತ ತಂಡದವರು ಭಾನುವಾರ ಇಲ್ಲಿ ಆರಂಭವಾದ ಸುಲ್ತಾನ್ ಆಫ್ ಜೋಹರ್ ಕಪ್ 21 ವರ್ಷದೊಳಗಿನವರ ಹಾಕಿ ಟೂರ್ನಿ ಯಲ್ಲಿ ಶುಭಾರಂಭ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರರು 2-1 ಗೋಲು ಗಳಿಂದ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿದರು. ಈ ಮೂಲಕ ಮೂರು ಪಾಯಿಂಟ್ ಸಂಪಾದಿಸಿದರು. ವಿಜಯಿ ತಂಡದವರು ವಿರಾಮದ ವೇಳೆಗೆ 1-0 ಗೋಲಿನಿಂದ ಮುಂದಿದ್ದರು.
18ನೇ ನಿಮಿಷದಲ್ಲಿ ರಮಣದೀಪ್ ಸಿಂಗ್ ಭಾರತ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. 50ನೇ ನಿಮಿಷದಲ್ಲಿ ತಲ್ವಿಂದರ್ ಸಿಂಗ್ ಗಳಿಸಿದ ಗೋಲು ಮುನ್ನಡೆಯನ್ನು 2-0ಗೆ ಹೆಚ್ಚಿಸಿತು. ಇಂಗ್ಲೆಂಡ್ ತಂಡದವರು ಪಂದ್ಯ ಮುಗಿಯಲು ಮೂರು ನಿಮಿಷಗಳಿದ್ದಾಗ ಒಂದು ಗೋಲು ಗಳಿಸಿದರು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸ್ಯಾಮ್ ಫ್ರೆಂಚ್ ಗೋಲಾಗಿ ಪರಿವರ್ತಿಸಿದರು.
ಆದರೆ ಭಾರತ ತಂಡದವರು ತಮಗೆ ಲಭಿಸಿದ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಹಾಳು ಮಾಡಿಕೊಂಡರು. ಪೆನಾಲ್ಟಿ ಕಾರ್ನರ್ ಪರಿಣತ ಅಮಿತ್ ರೋಹಿದಾಸ್ ಪ್ರಯತ್ನ ಸಾಕಾಗಲಿಲ್ಲ. ಇಂಗ್ಲೆಂಡ್ ತಂಡಕ್ಕೆ ಆರು ಅವಕಾಶ ಲಭಿಸಿತ್ತು. ಅದರಲ್ಲಿ ಒಂದರಲ್ಲಿ ಮಾತ್ರ ಯಶಸ್ವಿಯಾದರು. ಭಾರತದ ಗೋಲ್ ಕೀಪರ್ ಹರ್ಜೋತ್ ಸಿಂಗ್ ಗಮನಾರ್ಹ ಪ್ರದರ್ಶನ ತೋರಿದರು.
‘ಲಭಿಸಿದ ಉತ್ತಮ ಅವಕಾಶಗಳನ್ನು ನಾವು ಹಾಳು ಮಾಡಿಕೊಂಡೆವು. ಇಂಗ್ಲೆಂಡ್ ತಂಡದವರು ಸಾಕಷ್ಟು ಪೈಪೋಟಿ ನೀಡಿದರು. ಆದರೆ ಸಮಯ ಮಿಂಚಿ ಹೋಗಿಲ್ಲ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆ’ ಎಂದು ಭಾರತ ತಂಡದ ಕೋಚ್ ಗ್ರೇಗ್ ಕ್ಲಾರ್ಕ್ ನುಡಿದರು.