ಕೋಲಾರ: ಉತ್ತಮ ರಾಷ್ಟ್ರ ನಿರ್ಮಾಣವಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ಶಿಸ್ತು ಸಂಯುಮ ಅಗತ್ಯ. ಈ ನಿಟ್ಟಿನಲ್ಲಿ ಭಾರತ ಸೇವಾದಲದ ಪಾತ್ರ ಮಹತ್ವದ್ದು ಎಂದು ಸೇವಾದಲ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಪಿ.ಸೋಮಶೇಖರ್ ತಿಳಿಸಿದರು.
ತಾಲ್ಲೂಕಿನ ತೊಟ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಭಾರತ ಸೇವಾದಲ ಘಟಕ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿ, ಸೇವಾದಲದ ಘಟಕವನ್ನು ಸೇರಿ ಉತ್ತಮ ಕೌಶಲಗಳನ್ನು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.
ಸೇವಾದಲ ಘಟಕದ ಮಕ್ಕಳಿಗೆ ಉಚಿತವಾಗಿ ಬೆಲ್ಟ್, ಬ್ಯಾಡ್ಜ್, ಟೋಪಿಗಳನ್ನು ಇದೇ ಸಂದರ್ಭದಲ್ಲಿ ಚಿಟ್ನಹಳ್ಳಿ ಗ್ರಾಮದ ಉದ್ಯಮಿ ವೆಂಕಟಾಚಲಪತಿ ವಿತರಿಸಿದರು. ಜಿಲ್ಲಾ ಸಂಘಟಕ ವಿ.ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸೇವಾದಲ ತಾಲ್ಲೂಕು ಸಮಿತಿ ಉಪಾಧ್ಯಕ್ಷೆ ಚಾಮುಂಡೇಶ್ವರಿದೇವಿ, ಶ್ರೀಧರ್, ಗೋಪಾಲಕೃಷ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವಥ್ನಾರಾಯಣ ಸಿಆರ್ಪಿ ರಾಜಣ್ಣ, ಚಂದ್ರಣ್ಣ, ವರಲಕ್ಷ್ಮಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರತ್ನಮ್ಮ ಸ್ವಾಗತಿಸಿದರು. ಶಾಖೆಯ ನಾಯಕಿ ಸುಗುಣಾ ವಂದಿಸಿದರು. ಕೆ.ಸಿ. ರಾಧಮ್ಮ ನಿರೂಪಿಸಿದರು.