ವಾಷಿಂಗ್ಟನ್ (ಪಿಟಿಐ): ಭಯೋತ್ಪಾದಕ ದಾಳಿ ಭೀತಿಯಲ್ಲಿ ಬದುಕುತ್ತಿರುವ ಭಾರತವು ಹಣ ವರ್ಗಾವಣೆ ದಂಧೆ ಮತ್ತು ಭಯೋತ್ಪಾದಕರಿಗೆ ಹಣ ಒದಗಿಸುವ ಕಾರ್ಯಜಾಲದ ಆತಂಕ ಎದುರಿಸುತ್ತಿದೆ ಎಂದು ಅಂತರ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಸಿದೆ.
ಆದರೂ, ಪ್ರಬಲವಾಗುತ್ತಿರುವ ಆರ್ಥಿಕತೆ ಮತ್ತು ಜನಸಂಖ್ಯೆಯ ಮೂಲಕ ಏಷ್ಯಾದಲ್ಲಿನ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳ ನಾಯಕನಾಗಿರುವ ಭಾರತ ಈ ಕೃತ್ಯಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ಶ್ಲಾಘನೀಯ ಎಂದು ಐಎಂಎಫ್ ತನ್ನ ವರದಿಯಲ್ಲಿ ಪ್ರಶಂಸಿಸಿದೆ. 2010ರ ಜುಲೈನಲ್ಲಿ ಸಿದ್ಧಪಡಿಸಿರುವ ಈ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.
ದೇಶದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಯು ಹಣ ವರ್ಗಾವಣೆ ದಂಧೆಗೆ ಕಾರಣವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮಾದಕವಸ್ತು ಕಳ್ಳಸಾಗಣೆ, ವಂಚನೆ, ಖೋಟಾನೋಟು ತಯಾರಿಕೆ, ಗಡಿಯಾಚೆಗಿನ ಸಂಘಟಿತ ಅಪರಾಧ, ಮಾನವ ಕಳ್ಳಸಾಗಣೆ, ಭ್ರಷ್ಟಾಚಾರ ಇದರ ಹಿಂದಿವೆ ಎಂದು ವರದಿ ವಿಶ್ಲೇಷಿಸಿದೆ.
ದೇಶದಲ್ಲಿ ಕಾರ್ಯೋನ್ಮುಖವಾಗಿರುವ ಭಯೋತ್ಪಾದಕ ಸಂಘಟನೆಗಳ ಸಂಖ್ಯೆಯ ಬಗ್ಗೆ ಪ್ರಕಟಿತ ಅಂಕಿಅಂಶಗಳಿಲ್ಲ. ಎಂದು ಹೇಳಿದೆ. ಈ ಅಕ್ರಮಗಳ ನಿಯಂತ್ರಣಕ್ಕೆ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸುವುದು, ಹಣ ವರ್ಗಾವಣೆ ತಡೆಗಾಗಿ ಸ್ವದೇಶಿ ಚೌಕಟ್ಟು ರೂಪಿಸುವುದು, ಮುಟ್ಟುಗೋಲು, ಗುರುತು ದಾಖಲೆಗಳ ವಿಶ್ವಾಸಾರ್ಹತೆ ವೃದ್ಧಿ, ಹಣಕಾಸು ಕ್ಷೇತ್ರದ ಪರಿಣಾಮಕಾರಿ ಮೇಲುಸ್ತುವಾರಿ, ಭಾರತದ ಗಡಿಯ ಸೂಕ್ತ ವೆುೀಲ್ವಿಚಾರಣೆ ಇತ್ಯಾದಿ ಸಲಹೆಗಳನ್ನು ವರದಿ ನೀಡಿದೆ.