ಚಂಡೀಗಡ (ಪಿಟಿಐ): ಭಾರತದ ಕ್ರಿಕೆಟಿಗರು 2010ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳದ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಐ.ಎಸ್.ಬಿಂದ್ರಾ ಆರೋಪಿಸಿದ್ದಾರೆ. ಈ ವಿಷಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಲಂಕಾ ಕ್ರಿಕೆಟ್ ಮಂಡಳಿ ಮೇಲೆ ಬಿಸಿಸಿಐ ಒತ್ತಡ ಹೇರಿ ಅದನ್ನು ತೆಗೆಸಿತ್ತು ಎಂದೂ ಅವರು ಹೇಳಿದ್ದಾರೆ.
`ಆ ಪ್ರವಾಸ ಅವಧಿಯಲ್ಲಿ ಲಂಕಾ ಸೇನಾಪಡೆಯ ನಿವೃತ್ತ ಅಧಿಕಾರಿಯೊಬ್ಬರು ಭಾರತ ತಂಡಕ್ಕೆ ಭದ್ರತೆ ನೀಡಿದ್ದರು. ಒಂದು ದಿನ ರಾತ್ರಿ ಒಬ್ಬ ಅಧಿಕಾರಿ ಹುಡುಗಿಯೊಬ್ಬಳನ್ನು ಆಟಗಾರ ಉಳಿದುಕೊಂಡಿದ್ದ ಕೊಠಡಿಗೆ ಕರೆತಂದಿದ್ದರು. ಆತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ. ಪಂದ್ಯಕ್ಕೆ ಮುನ್ನಾ ದಿನ ಆ ಹುಡುಗಿ ಆಟಗಾರನ ಕೊಠಡಿಯಲ್ಲಿ ರಾತ್ರಿ ಕಳೆದಿದ್ದಳು. ಐಸಿಸಿ ಪಟ್ಟಿಯಲ್ಲಿರುವ ಶಂಕಿತ ಬುಕ್ಕಿಯೊಬ್ಬ ಆ ಹುಡುಗಿ ಕಳುಹಿಸಿದ್ದ. ಇದು ಭದ್ರತೆಯ ಉಲ್ಲಂಘನೆ' ಎಂದು ಬಿಂದ್ರಾ ವಿವರಿಸಿದ್ದಾರೆ.
`ಸೇನಾಪಡೆಯ ನಿವೃತ್ತ ಅಧಿಕಾರಿಯ ಹೇಳಿಕೆ ಆಧರಿಸಿ ಲಂಕಾ ಮಂಡಳಿ ವರದಿ ಸಿದ್ಧಪಡಿಸಿತ್ತು. ಭಾರತ ತಂಡದ ಮ್ಯಾನೇಜರ್ ಹಾಗೂ ಐಸಿಸಿ ಭ್ರಷ್ಟಾಚಾರ ಘಟದ ಅಧಿಕಾರಿಗೂ ತಿಳಿಸಲಾಗಿತ್ತು. ಆದರೆ ಬಿಸಿಸಿಐನ ಒತ್ತಡದ ಕಾರಣ ಲಂಕಾ ಕ್ರಿಕೆಟ್ ಮಂಡಳಿ ವರದಿಯನ್ನು ಹಿಂಪಡೆದಿತ್ತು' ಎಂದಿದ್ದಾರೆ.