ಬರ್ಲಿನ್ (ಪಿಟಿಐ): ಮತಾಂತರವಾಗಲು ಒಪ್ಪದ ಭಾರತೀಯ ವಿದ್ಯಾರ್ಥಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ನಾಲಿಗೆ ಸೀಳಿರುವ ದುಷ್ಕೃತ್ಯ ಜರ್ಮನಿಯ ಬಾನ್ ನಗರದಲ್ಲಿ ನಡೆದಿದೆ.
24 ವರ್ಷದ ವಿದ್ಯಾರ್ಥಿಯು ಬಾನ್ ನಗರದಲ್ಲಿ ತಾನು ನೆಲೆಸಿದ್ದ ಜಾಗಕ್ಕೆ ವಾಪಸು ಹೋಗುತ್ತಿದ್ದಾಗ ಮುಸ್ಲಿಂ ಮೂಲಭೂತವಾದಿಗಳು ಅವನನ್ನು ಅಡ್ಡಗಟ್ಟಿ, ಯಾವ ಧರ್ಮಕ್ಕೆ ಸೇರಿದವನೆಂದು ಕೇಳಿದರು.
ನಂತರ, ಇಸ್ಲಾಂಗೆ ಮತಾಂತರವಾಗಲು ಸೂಚಿಸಿದ ಅವರು, ಇಲ್ಲದಿದ್ದರೆ ನಾಲಿಗೆ ಸೀಳುವುದಾಗಿ ಬೆದರಿಕೆ ಹಾಕಿ, ನಂತರ ಹಾಗೆಯೇ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಯಾರೆಂಬುದನ್ನು ಬಹಿರಂಗಪಡಿಸಿಲ್ಲ. ಹಲ್ಲೆಯಿಂದ ರಕ್ತ ಒಸರುತ್ತಿದ್ದ ವಿದ್ಯಾರ್ಥಿಯನ್ನು ದಾರಿಯಲ್ಲೇ ಬಿಟ್ಟ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾದರು. ನಂತರ ದಾರಿಹೋಕರೊಬ್ಬರು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಿದರು. ಯುವಕನಿಗೆ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಬಿಡುಗಡೆ ಮಾಡಲಾಗಿದೆ.