ನವದೆಹಲಿ (ಪಿಟಿಐ): ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತ ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಬಗ್ಗೆ ವಿರೋಧ ಪಕ್ಷಗಳು ತೀವ್ರ ಟೀಕಾ ಪ್ರಹಾರ ಮಾಡಿವೆ.
ಇದು ಕೇಂದ್ರ- ರಾಜ್ಯಗಳ ಸಂಬಂಧವನ್ನು ಹಾಳುಗೆಡವುತ್ತದೆ. ಈ ಧೋರಣೆ ಮುಂದುವರಿದರೆ ರಾಜ್ಯಗಳು ಕೇಂದ್ರದ ಅಡಿಯಾಳಾಗಿ ವರ್ತಿಸಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಮೋಹನ್ ಸಿಂಗ್ ಆಕ್ಷೇಪಿಸಿದ್ದಾರೆ.
‘ರಾಜ್ಯಪಾಲರು ತಮ್ಮ ಮಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರ ನಡೆಸುವವರು ಮುಖ್ಯಮಂತ್ರಿಯೇ ವಿನಾ ರಾಜ್ಯಪಾಲರಲ್ಲ’ ಎಂದು ಎನ್ಡಿಎ ಸಂಚಾಲಕರೂ ಆದ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಹೇಳಿದ್ದಾರೆ.