ಹರಿಹರ: ‘ಭಾವಿಸಿದ್ದೆಲ್ಲವೂ ನೈಜವಾಗಿರುವುದಿಲ್ಲ ಎಂಬುದನ್ನು ಅರಿಯದವರು ನೆಮ್ಮದಿಯಾಗಿ ಜೀವಿಸಲು ಸಾಧ್ಯವಿಲ್ಲ’ ಎಂದು ಕೇರಳ ರಾಜ್ಯದ ಅಲೆಪ್ಪಿಯ ರಾಮಕೃಷ್ಣ ಮಠದ ವೀರಭದ್ರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಎಂಕೆಇಟಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಮಾನವೀಯ ಸಂಬಂಧಗಳ ನಿರ್ವಹಣೆ’ ವಿಷಯ ಕುರಿತು ಅವರು ಪ್ರವಚನ ನೀಡಿದರು.
ನೋಡುಗರ ಭಾವನೆಯಂತೆಯೇ ಎದುರಿನ ವಸ್ತುಗಳು ಗೋಚರಿಸುತ್ತವೆ. ನೋಡುವ ಭಾವ ಶುದ್ಧಿಯಾಗಿದ್ದಾಗ ಮಾತ್ರ ವಸ್ತುಸ್ಥಿತಿ ಗೋಚರಿಸುತ್ತದೆ. ಎಲ್ಲರನ್ನೂ ಹಾಗೂ ಎಲ್ಲವನ್ನೂ ತಪ್ಪು ಎಂದು ದೂಷಿಸುವವರ ಭಾವನೆಗಳು ಶುದ್ಧವಾಗಿರಲು ಸಾಧ್ಯವಿಲ್ಲ. ಬಹುತೇಕರು ತಮ್ಮತಮ್ಮ ಆಲೋಚನೆಗಳಲ್ಳೇ ಬಂಧಿ ಆಗಿರುತ್ತಾರೆ. ಅನಿಸಿಕೆ ಮತ್ತು ನೈಜತೆ ಮಧ್ಯೆ ಇರುವ ಪರದೆ ಸರಿದಾಗ ಭಾವಶುದ್ಧಿಯಾಗುತ್ತದೆ. ಇದೇ ಆತ್ಮ ನಿರೀಕ್ಷಣೆ ಎಂದರು.
ಭೂತಕಾಲದ ಹಳಸಿದ ಆಲೋಚನೆಗಳಿಂದ ಜೀವನದ ನೆಮ್ಮದಿ ಕದಡುತ್ತದೆ. ಯಾರಿಂದಲೂ ಏನನ್ನೂ ಬಯಸದೇ ಇದ್ದರೆ ನೆಮ್ಮದಿ ತಾನಾಗೇ ಬರುತ್ತದೆ. ಭಕ್ತಿ, ಪ್ರೀತಿ ಹಾಗೂ ವಾತ್ಸಲ್ಯಕ್ಕೆ ಕೊಡುವುದು ಮಾತ್ರ ಗೊತ್ತು. ಅದು ಎಂದಿಗೂ ಏನನ್ನೂ ಬಯಸುವುದಿಲ್ಲ. ಪ್ರಪಂಚಕ್ಕೆ ಪ್ರೀತಿ ಹಾಗೂ ವಾತ್ಸಲ್ಯದ ಧಾರೆ ಎರೆದ ರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರು ಲೋಕ ಖ್ಯಾತರಾದರು. ಧನಾತ್ಮಕ ಚಿಂತನೆ, ಸಹಿಷ್ಣುತೆ, ಸಂಯಮ ಹಾಗೂ ಸೇವಾ ಭಾವನೆಗಳು ಕೌಟುಂಬಿಕ ಜೀವನವನ್ನು ಭದ್ರಗೊಳಿಸುತ್ತವೆ. ಯಾವುದನ್ನು ಸರಿಪಡಿಸಲು ಸಾಧ್ಯವಿಲ್ಲವೋ ಅದನ್ನು ಅನುಭವಿಸಲೇಬೇಕು ಎಂದರು.
ವೇದಿಕೆಯಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾರಾದೇಶಾನಂದ ಸ್ವಾಮೀಜಿ ಹಾಗೂ ಕೃಷ್ಣ ಸ್ವಾಮೀಜಿ ಇದ್ದರು.
ಕೃಷ್ಣ ಬಿಳಗೊಳ ಸ್ವಾಗತಿಸಿದರು. ಡಾ.ಶಾರದಾಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.