ಅರ್ಕಾವತಿ ಬಡಾವಣೆಯಲ್ಲಿ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಶಪಡಿಸಿಕೊಂಡಿದ್ದ ಥಣಿಸಂದ್ರ ಗ್ರಾಮದ 3.8 ಎಕರೆ ಭೂಮಿಯನ್ನು ಕಾನೂನು ಉಲ್ಲಂಘಿಸಿ ಕುಮಾರಸ್ವಾಮಿ ಅವರು ಡಿನೋಟಿಫೈ ಮಾಡಿದ್ದಾರೆ ಎಂದು ಮಧುಸ್ವಾಮಿ ಎಂಬುವವರು ದೂರು ಸಲ್ಲಿಸಿದ್ದರು. ಈ ಅಕ್ರಮದಲ್ಲಿ ಮಾಜಿ ಸಚಿವ ಸಿ.ಚೆನ್ನಿಗಪ್ಪ ಅವರದ್ದೂ ಪಾಲಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಭಾರತೀಯ ಜನತಾ ಪಕ್ಷವು 2007ರ ಅಕ್ಟೋಬರ್ ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಶ್ರ ಸರ್ಕಾರಕ್ಕೆ ಬೆಂಬಲ ವಾಪಸ್ಸು ಪಡೆದಾಗ ಸರ್ಕಾರ ಬಿದ್ದುಹೋಯಿತು. ಅದೇ ಸಂದರ್ಭದಲ್ಲಿ ಅಂದು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಈ ಅಕ್ರಮ ಎಸಗಿದ್ದಾರೆ ಎಂದು ದೂರಲಾಗಿದೆ.
ಭೂ ಹಗರಣಗಳ ಕಾರಣ ಕಾನೂನು ಕ್ರಮ ಎದುರಿಸುತ್ತಿರುವ ಸಚಿವರುಗಳಲ್ಲಿ ವಸತಿ ಸಚಿವ ವಿ.ಸೋಮಣ್ಣ, ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಸೇರಿದ್ದಾರೆ. ಅವರೊಂದಿಗೆ ಬಿಜೆಪಿ ಶಾಸಕರಾದ ಸಿ.ಟಿ.ರವಿ, ನೆಹ್ರೂ ಓಲೆಕಾರ ಅವರ ಮೇಲೂ ಭೂ ಅಕ್ರಮ ನಡೆಸಿದ ಆರೋಪಗಳಿವೆ.