ನವದೆಹಲಿ (ಪಿಟಿಐ): ಹಲವು ದಿನಗಳಿಂದ ನೆನೆಗುದಿಯಲ್ಲಿ ಇದ್ದ ವಿವಾದಾತ್ಮಕ ಭೂಸ್ವಾಧೀನ ಮಸೂದೆಗೆ ಸಚಿವರ ಸಮಿತಿ ಒಪ್ಪಿಗೆ ನೀಡಿದ್ದು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ವೇದಿಕೆ ಸಿದ್ಧವಾದಂತಿದೆ.
ಸರ್ಕಾರಿ, ಖಾಸಗಿ ಸಹಭಾಗಿತ್ವದ ಅಥವಾ ಖಾಸಗಿ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ಮೂರನೇ ಎರಡರಷ್ಟು ಭಾಗದ ಭೂಮಾಲೀಕರ ಒಪ್ಪಿಗೆ ಅಗತ್ಯವಾಗಿದೆ ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ.
ಈ ಮಸೂದೆ ಕಾಯ್ದೆಯಾದಾಗ ಅದನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸುವುದಿಲ್ಲ. ಅದರ ಬದಲಿಗೆ ಕಾಯ್ದೆ ಜಾರಿಗೊಳಿಸಲು ನಿರ್ದಿಷ್ಟ ಕಾಲಮಿತಿ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಗುಂಪಿನಲ್ಲಿ ಹಲವು ಭಿನ್ನಾಭಿಪ್ರಾಯಗಳು ಇದ್ದವು. ಕೆಲ ಸಚಿವರು ಕಾಯ್ದೆ ಪೂರ್ವಾನ್ವಯವಾಗುವಂತೆ ಜಾರಿಯಾಗುವುದನ್ನು ವಿರೋಧಿಸಿದ್ದರು. ಮತ್ತೆ ಕೆಲ ಸಚಿವರು ಭೂಸ್ವಾಧೀನಕ್ಕೆ ಭೂಮಾಲೀಕರು ಹಾಗೂ ಆ ಜಮೀನನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ ಶೇ 80ರಷ್ಟು ಜನರ ಒಪ್ಪಿಗೆ ಬೇಕು ಎಂಬ ಅಂಶವನ್ನು ವಿರೋಧಿಸಿದ್ದರು.
ಮಸೂದೆ ಮಂಡಿಸಲು ಇರುವ ಅಡೆತಡೆಗಳೆಲ್ಲ ಈಗ ನಿವಾರಣೆಯಾಗಿವೆ. ಈ ಸಂಬಂಧ ಇರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಿದ್ದೇವೆ. ಕರಡು ಮಸೂದೆ ಅಂತಿಮಗೊಳಿಸಿದ್ದೇವೆ ಎಂದು ಸಚಿವರ ಸಮಿತಿಯ ಮುಖ್ಯಸ್ಥರಾದ ಶರದ್ ಪವಾರ್ ಮಂಗಳವಾರ ಸಭೆಯ ನಂತರ ತಿಳಿಸಿದರು.